ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರು ನೆಲೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಸಂಬಂಧ ಸಮಗ್ರ ತನಿಖೆ ನಡೆಸುವಂತೆ ಸಾಮಾಜಿಕ ಹೋರಾಟಗಾರ ಕೆ.ಆರ್. ರವೀಂದ್ರ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ರಾಜ್ಯ ಚುನಾವಣಾ ಆಯುಕ್ತರು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೂ ಅವರು ಪ್ರತ್ಯೇಕವಾಗಿ ಮನವಿ ನೀಡಿದ್ದಾರೆ.

ದೂರಿನಲ್ಲಿ, ನಾಗಮಂಗಲದ ವಿವಿಧ ಕೋಳಿ ಫಾರಂಗಳು, ಫೀಡ್ಸ್ ಕಾರ್ಖಾನೆಗಳು ಹಾಗೂ ಕೈಗಾರಿಕಾ ಘಟಕಗಳಲ್ಲಿ ಸಾವಿರಾರು ವಲಸಿಗರು ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಅವರ ಜನನ ಪ್ರಮಾಣಪತ್ರ, ಶಿಕ್ಷಣದ ದಾಖಲೆಗಳು, ಗುರುತಿನ ಚೀಟಿಗಳು ಸೇರಿದಂತೆ ಎಲ್ಲ ಮೂಲ ದಾಖಲೆಗಳ ನೈಜತೆಯನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಲಾಗಿದೆ. ಉತ್ತರ ಭಾರತದ ವಿವಿಧ ರಾಜ್ಯಗಳ ನಿವಾಸಿಗಳೆಂದು ಸಲ್ಲಿಸಿರುವ ದಾಖಲೆಗಳೂ ಪರಿಶೀಲನೆಗೆ ಒಳಪಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗಣೇಶ ವಿಸರ್ಜನೆ ವೇಳೆ ನಾಗಮಂಗಲ ಹಾಗೂ ಮದ್ದೂರಿನಲ್ಲಿ ನಡೆದ ಕೋಮು ಘರ್ಷಣೆಗಳಲ್ಲಿ ಕೆಲ ಅಕ್ರಮ ಬಾಂಗ್ಲಾ ವಲಸಿಗರು ಭಾಗಿಯಾಗಿರುವ ಶಂಕೆಯಿದ್ದು, ಈ ಆಯಾಮದಲ್ಲೂ ತನಿಖೆ ನಡೆಸಬೇಕೆಂದು ಕೆ.ಆರ್. ರವೀಂದ್ರ ಆಗ್ರಹಿಸಿದ್ದಾರೆ. ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ನೀಡಿದ ಏಜೆಂಟರು, ಅಂತಹ ಕಾರ್ಮಿಕರನ್ನು ನೇಮಿಸಿಕೊಂಡಿರುವ ಕೋಳಿ ಫಾರಂ ಹಾಗೂ ಕೈಗಾರಿಕಾ ಘಟಕಗಳ ಮಾಲೀಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.

ದೇವಲಾಪುರ ಹೋಬಳಿ, ಕರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕೋಳಿ ಫಾರಂಗಳು, ಎಸ್.ಎಂ. ಸ್ಟಾರ್ ಫೀಡ್ಸ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಹಲವು ಕೈಗಾರಿಕಾ ಘಟಕಗಳಲ್ಲಿ ದಾಖಲೆ ಪರಿಶೀಲನೆ ನಡೆಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ನಾಗಮಂಗಲ-ಮೈಸೂರು ರಸ್ತೆಯ ಎ. ಶ್ರೀರಾಮನಹಳ್ಳಿ ಸಮೀಪದ ಕೋಳಿ ಫಾರಂಗಳಲ್ಲೂ ಉತ್ತರ ಭಾರತದ ನಿವಾಸಿಗಳ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ಹಾಗೂ ಮತದಾರರ ಗುರುತಿನ ಚೀಟಿಗಳನ್ನು ಪಡೆದು ಕೆಲಸ ಮಾಡುತ್ತಿರುವ ಆರೋಪ ಕೇಳಿಬಂದಿದೆ ಎಂದು ಅವರು ತಿಳಿಸಿದ್ದಾರೆ.

ಇದರ ಜೊತೆಗೆ, ಸ್ಟಾರ್ ಗ್ರೂಪ್‌ಗೆ ಸಂಬಂಧಿಸಿದ ಸಂಸ್ಥೆಗಳ ವಿರುದ್ಧ ಹಿಂದೆ ಇಂಧನ ಕಳವು ಪ್ರಕರಣ ದಾಖಲಾಗಿರುವುದನ್ನೂ ಉಲ್ಲೇಖಿಸಿರುವ ಅವರು, ಆ ಪ್ರಕರಣದ ಜತೆಗೆ ಈ ಆರೋಪಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸೂಚನೆ: ಮೇಲಿನ ಆರೋಪಗಳು ದೂರುದಾರ ಕೆ.ಆರ್. ರವೀಂದ್ರ ಅವರು ಸಲ್ಲಿಸಿರುವ ದೂರಿನಲ್ಲಿ ಮಾಡಿರುವ ಆರೋಪಗಳಾಗಿದ್ದು, ಸಂಬಂಧಿತ ಅಧಿಕಾರಿಗಳ ಅಧಿಕೃತ ತನಿಖೆ ಅಥವಾ ನ್ಯಾಯಾಲಯದ ತೀರ್ಪಿನ ಮೂಲಕ ಇನ್ನೂ ದೃಢೀಕರಣವಾಗಿಲ್ಲ.

Leave a Reply

Your email address will not be published. Required fields are marked *

Related News

error: Content is protected !!