ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು ಆನಂದಪುರ ಹೋಬಳಿಯ ಗೌತಮಪುರ ಗ್ರಾಮದಲ್ಲಿ ಮಾನವೀಯತೆಯನ್ನು ನಿರ್ಲಜ್ಜವಾಗಿ ಹಿಂಗೋಳಿಸುವಂತಹ ಘಟನೆ ನಡೆದಿದೆ. ಕೇವಲ ಮನೆಯ ಮುಂದೆ ಕಸ ಹಾಕಿದ ಕುರಿತು ಕೇಳಿದ್ದಕ್ಕೆ 67 ವರ್ಷದ ವೃದ್ಧೆ ಮೇಲೆ ತೀವ್ರ ಹಲ್ಲೆ ನಡೆಸಿದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.

ಹುಚ್ಚಮ್ಮ ಎಂಬ ವೃದ್ಧೆ ಅವರು ತಮ್ಮ ಮನೆಯ ಮುಂದಿನ ಸ್ಥಳದಲ್ಲಿ ಕಸ ಹಾಕುತ್ತಿದ್ದ ಪ್ರೇಮ ಎಂಬ ಮಹಿಳೆಯನ್ನು ಪ್ರಶ್ನಿಸಿದ್ದರು. ಈ ಸರಳ ಪ್ರಶ್ನೆಕೆ ಆಕ್ರೋಶಗೊಂಡ ಪ್ರೇಮ ಮತ್ತು ಅವರ ಬೆಂಬಲಿಗರಾದ ಮಂಜುನಾಥ್ ಹಾಗೂ ದರ್ಶನ್ ಎಂಬ ಇಬ್ಬರು ಯುವಕರು ಹುಚ್ಚಮ್ಮ ಅವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ, ಹಗ್ಗದಿಂದ ಕಂಬಕ್ಕೆ ಕಟ್ಟಿಹಾಕಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ.

ಈ ಅಮಾನವೀಯ ದುರಾಚಾರದ ದೃಶ್ಯಗಳು ಮೊಬೈಲ್ ಮೂಲಕ ದೃಶ್ಯೀಕರಿಸಿ ಹರಡಿದ್ದು, ಅದು ಸಾರ್ವಜನಿಕರಲ್ಲಿ ತೀವ್ರ ಕೋಪ ಹಾಗೂ ಬೇಸರಕ್ಕೆ ಕಾರಣವಾಗಿದೆ.

ಹಲ್ಲೆಯಿಂದ ಆಘಾತಕ್ಕೊಳಗಾದ ಹುಚ್ಚಮ್ಮ ಅವರು ಆನಂದಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಸಂಬಂಧ ಮಾತನಾಡಿದ ಅವರ ಪುತ್ರ ಕನ್ನಪ್ಪ, “ನನ್ನ ತಾಯಿಗೆ ನ್ಯಾಯ ಸಿಗಬೇಕು, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂಬ ಮನವಿಯನ್ನು ಮಾಡಿಕೊಂಡಿದ್ದಾರೆ.

ಆನಂದಪುರ ಪೊಲೀಸರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯರ ಅಭಿಪ್ರಾಯ ಪ್ರಕಾರ, ಇಂತಹ ಕ್ರೂರತೆ ಸಾಮಾಜಿಕ ಮೌಲ್ಯಗಳ ಹೀನಾಯ ಸಂಕೇತವಾಗಿದೆ ಮತ್ತು ಆರೋಪಿಗಳಿಗೆ ಗಂಭೀರ ಶಿಕ್ಷೆ ಅಗತ್ಯವಾಗಿದೆ.

 

Leave a Reply

Your email address will not be published. Required fields are marked *

Related News

error: Content is protected !!