ಮುಂಬೈನಲ್ಲಿ ಮಾನವೀಯತೆ ಕಳೆಯುತ್ತಿರುವ ಕ್ರೂರ ಘಟನೆ ಬೆಳಕಿಗೆ ಬಂದಿದೆ. ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 60 ವರ್ಷದ ಹಿರಿಯ ನಾಗರಿಕೆಯನ್ನು ತನ್ನದೇ ಮೊಮ್ಮಗನೆಂದು ಶಂಕಿಸಲಾದ ವ್ಯಕ್ತಿ ಕಸದ ರಾಶಿಗೆ ಎಸೆದುಹೋಗಿದ್ದಾನೆ.

ಶನಿವಾರ ಮುಂಬೈ ನಗರದ ಆರೆ ಕಾಲೋನಿಯ ರಸ್ತೆಯ ಪಕ್ಕದ ಕಸದ ರಾಶಿಯ ಬಳಿ ದುರಸ್ಥಿತಿಯಲ್ಲಿದ್ದ ಮಹಿಳೆಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಯಶೋದಾ ಗಾಯಕ್‌ವಾಡ್ ಎಂದು ಗುರುತಿಸಲ್ಪಟ್ಟ ಈ ಮಹಿಳೆ ಶರೀರದ ಸ್ಥಿತಿ ಅತ್ಯಂತ ನಾಜೂಕಾಗಿದ್ದು, ಅವರು ಬಹುತೇಕ ಮಾತನಾಡಲಾಗದಷ್ಟು ದುರ್ಬಲರಾಗಿದ್ದಾರಂತೆ.

ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ, ಯಶೋದಾ ತಮ್ಮ ಮೊಮ್ಮಗನೇ ತಮ್ಮನ್ನು ರಸ್ತೆಯ ಪಕ್ಕದ ಕಸದ ರಾಶಿಗೆ ಎಸೆದುಹೋಗಿದ್ದಾನೆ ಎಂದು ತಿಳಿಸಿದ್ದಾಳೆ. ತಕ್ಷಣವೇ ವೈದ್ಯಕೀಯ ಸಹಾಯದ ಅವಶ್ಯಕತೆ ಇದ್ದರೂ, ಹಲವಾರು ಆಸ್ಪತ್ರೆಗಳು ಆಕೆಯ ಸ್ಥಿತಿ ಗಮನಿಸಿ ದಾಖಲಾತಿಗೆ ನಿರಾಕರಿಸಿವೆ. ಕೊನೆಗೆ ಕೂಪರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಯಶೋದಾ ಗಾಯಕ್‌ವಾಡ್ ಅವರಿಂದ ಮಲಾಡ್ ಹಾಗೂ ಕಾಂದಿವಲಿ ಪ್ರದೇಶಗಳಿಗೆ ಸಂಬಂಧಿಸಿದ ಎರಡು ವಿಳಾಸಗಳನ್ನು ಪೊಲೀಸರು ಪಡೆದುಕೊಂಡಿದ್ದಾರೆ. ಇದೀಗ ಪೊಲೀಸರು ಆ ವಿಳಾಸದ ಮೂಲಕ ಕುಟುಂಬಸ್ಥರನ್ನು ಪತ್ತೆಹಚ್ಚಲು ಕ್ರಮ ಕೈಗೊಂಡಿದ್ದು, ಯಶೋದಾ ಅವರ ಚಿತ್ರವನ್ನು ವಿವಿಧ ಪೊಲೀಸ್ ಠಾಣೆಗಳಿಗೆ ಹಂಚಿ, ಸಂಬಂಧಿಕರ ಜಾಡು ಹುಡುಕುತ್ತಿದ್ದಾರೆ.

ಈ ಮಧ್ಯೆ, ಹಿರಿಯ ನಾಗರಿಕರ ಮೇಲಿನ ಈ ರೀತಿಯ ಅಮಾನವೀಯ ವರ್ತನೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದ್ದು, ಆರೋಪಿಗೆ ಶೀಘ್ರದಲ್ಲೇ ಕಾನೂನಿನ ಕಡಿವಾಣ ಬೀಳುವ ಸಾಧ್ಯತೆ ಇದೆ.

error: Content is protected !!