
ಬೆಳಗಾವಿ: ಮೂರು ದಶಕಗಳ ಹಿಂದಿನ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ನಿವೃತ್ತವಾಗಿರುವ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಜೈಲು ಸೇರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆ 30 ವರ್ಷಗಳ ಹಿಂದೆ ನಡೆದಿದ್ದು, ಇದೀಗ ಸುಪ್ರೀಂ ಕೋರ್ಟ್ ತೀರ್ಪಿನಿಂದ ಆರೋಪಿ ಮತ್ತೆ ಕಾರಾಗೃಹ ಪಾಲಾಗಿದ್ದಾರೆ.
ನಾಗೇಶ್ ಶಿವಂಗೇಕರ್ ಎಂಬವರು ಬೆಳಗಾವಿ ಜಿಲ್ಲೆಯ ಕಡೋಲಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭ, ಪಹಣಿ ಪತ್ರದಲ್ಲಿ ವಾಟ್ನಿ ಮಾಡಲು 500 ರೂಪಾಯಿ ಲಂಚವನ್ನು ಕೇಳಿದ್ದಾರಂತೆ. ಈ ಬಗ್ಗೆ ಲಕ್ಷ್ಮಣ ಕಟಾಂಬಳೆ ಎಂಬುವವರು ಲೋಕಾಯುಕ್ತೆಗೆ ದೂರು ನೀಡಿದ್ದರು. ಲೋಕಾಯುಕ್ತ ಪೊಲೀಸರು 500 ರೂ. ಲಂಚ ಪಡೆಯುತ್ತಿರುವ ವೇಳೆ ದಾಳಿ ನಡೆಸಿ ನಾಗೇಶ್ ಅವರನ್ನು ಬಂಧಿಸಿದ್ದರು.
ಈ ಪ್ರಕರಣದ ವಿಚಾರಣೆ 2006 ರಲ್ಲಿ ಪೂರ್ಣಗೊಂಡು, ಸ್ಥಳೀಯ ನ್ಯಾಯಾಲಯ ನಾಗೇಶ್ ಅವರಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 1000 ರೂ. ದಂಡ ವಿಧಿಸಿತ್ತು. ನಂತರ ಅವರು ಈ ತೀರ್ಪು ವಿರುದ್ಧ ಧಾರವಾಡ ಬೃಹತ್ ನ್ಯಾಯಾಲಯದ ಶರಣಾಗಿದ್ದು, ತಾತ್ಕಾಲಿಕವಾಗಿ ರಿಲೀಫ್ ಪಡೆದಿದ್ದರು.
ಆದರೆ ಲೋಕಾಯುಕ್ತ ಈ ತಾತ್ಕಾಲಿಕ ತೀರ್ಪು ಪ್ರಶ್ನಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿತ್ತು. ಇದೀಗ ತೀರ್ಪು , ಸುಪ್ರೀಂ ಕೋರ್ಟ್ ಲೋಕಾಯುಕ್ತ ಪರ ನಿಲ್ಲುತ್ತಾ ಮೂಲ ತೀರ್ಪನ್ನು ಮಾನ್ಯ ಮಾಡಿದೆ. ಇದೇ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಈಗ 10 ವರ್ಷಗಳ ಹಿಂದೆ ನಿವೃತ್ತರಾದ ನಾಗೇಶ್ ಶಿವಂಗೇಕರ್ ಅವರನ್ನು ಬಂಧಿಸಿ, ಬೆಳಗಾವಿಯ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ.
ಇಲ್ಲಿ ವಿಶೇಷವೆಂದರೆ, ದೂರು ನೀಡಿದ್ದ ವ್ಯಕ್ತಿ ಲಕ್ಷ್ಮಣ ಕಟಾಂಬಳೆ 5 ವರ್ಷಗಳ ಹಿಂದೆ ಸಾವನ್ನಪ್ಪಿದ್ದರೂ ಕೂಡ ನ್ಯಾಯದ ಚಕ್ರ ತನ್ನ ಪಥವನ್ನು ಮುಂದುವರಿಸಿ ಕೊನೆಗೂ ತಪ್ಪಿತಸ್ಥನಿಗೆ ಶಿಕ್ಷೆ ವಿಧಿಸಲು ಕಾರಣವಾಯಿತು.
ಈ ಘಟನೆಯು “ವಿಧಿ ಯವಳಿಗೆ ವಿಳಂಬವಾಯಿತೆ ಹೊರತು ವಿಳಾಸ ತಪ್ಪದು” ಎಂಬ ಮಾತಿಗೆ ಮತ್ತೆ ದೃಢತೆ ನೀಡಿದಂತಾಗಿದೆ.