
ಬೆಂಗಳೂರು: ಮದುವೆಗಾಗಿ ಮನೆ ಖಾಲಿ ಇದ್ದನ್ನು ತಪ್ಪಾಗಿ ಬಳಸಿಕೊಂಡು ಬೃಹತ್ ಕಳ್ಳತನ ನಡೆಸಿದ ಮೂವರು ಆರೋಪಿಗಳನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶಿವಪ್ರಸಾದ್, ಲಿಖಿತ್ ಕಡ್ಡಿ ಹಾಗೂ ಜಯದೀಪ್ ಎಂದು ಗುರುತಿಸಲಾಗಿದೆ. ಈ ಮೂವರು ಕೂಡ ಕುಖ್ಯಾತ ಮನೆಕಳ್ಳ ಪೆಪ್ಸಿ ರಘು ತಂಡದ ಸದಸ್ಯರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ 21ರಂದು ಕತ್ರಿಗುಪ್ಪೆಯ ನಿವಾಸಿ ವಿಶ್ವನಾಥ್ ಅವರು ತಮ್ಮ ಕುಟುಂಬದೊಂದಿಗೆ ಮದುವೆ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿಗೆ ತೆರಳಿದ್ದರು. ಈ ವೇಳೆ ಟೆರಸ್ ಮೂಲಕ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ 24 ಲಕ್ಷ ನಗದು ಹಣ, 175 ಗ್ರಾಂ ಚಿನ್ನಾಭರಣ ಹಾಗೂ ಸುಮಾರು ಒಂದೂವರೆ ಕೆಜಿ ಬೆಳ್ಳಿ ನಾಣ್ಯವನ್ನು ಲೂಟಿ ಮಾಡಿದ್ದರು.
ಕಳ್ಳತನದ ನಂತರ ಆರೋಪಿಗಳು ದೋಚಿದ ಹಣವನ್ನು ಗೋವಾ ಕ್ಯಾಸಿನೊಗಳಲ್ಲಿ ಫೂಟ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಕರಣ ಸಂಬಂಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳ ಬಂಧನ ನಡೆದಿದೆ.
ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಪೆಪ್ಸಿ ರಘು ಎಂಬ ರಘುವನಹಳ್ಳಿ ಮೂಲದ ವ್ಯಕ್ತಿ ಇನ್ನೂ ಪರಾರಿಯಾಗಿದ್ದಾನೆ. ಪೊಲೀಸರ ತಂಡ ಈಗಾಗಲೇ ಆತನ ಪತ್ತೆಗೆ ಬಲೆ ಬೀಸಿದ್ದು, ಶೀಘ್ರದಲ್ಲೇ ಬಂಧನ ಸಾಧ್ಯವೆಂಬ ನಂಬಿಕೆ ವ್ಯಕ್ತಪಡಿಸಲಾಗಿದೆ.
ಬಂಧಿತ ಆರೋಪಿಗಳಿಂದ 9 ಲಕ್ಷ ನಗದು, 175 ಗ್ರಾಂ ಚಿನ್ನಾಭರಣ ಹಾಗೂ ಒಂದೂವರೆ ಕೆಜಿ ಬೆಳ್ಳಿ ನಾಣ್ಯ ವಶಪಡಿಸಿಕೊಳ್ಳಲಾಗಿದೆ. ವಿಚಾರಣೆಯ ನಂತರ ಇನ್ನಷ್ಟು ಕಳ್ಳತನ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.