ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಕೈದಿಗಳಿಗೆ ತಪಾಸಣೆಗೆ ಬಾರದ ಮಾರ್ಗದಿಂದ ಮೊಬೈಲ್ ಪೂರೈಸಲು ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಜೈಲಿಗೆ ನಿಯೋಜಿತರಾಗಿದ್ದ ಇಬ್ಬರು ಹೊರಗುತ್ತಿಗೆ ಮನಶಾಸ್ತ್ರಜ್ಞರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಾರತ್ತಹಳ್ಳಿಗೆ ಸೇರಿದ ನವ್ಯಶ್ರೀ ಹಾಗೂ ಸೃಜನ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಹೊಸ ಮೊಬೈಲ್ ಫೋನ್‌ವೊಂದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಶುಕ್ರವಾರ ಬೆಳಿಗ್ಗೆ ಜೈಲಿನ ಪ್ರವೇಶ ದ್ವಾರದಲ್ಲಿ ನಡೆಯುತ್ತಿದ್ದ ನಿಯಮಿತ ಶರೀರ ತಪಾಸಣೆಯ ವೇಳೆ ನವ್ಯಶ್ರೀ ಅವರ ಒಳ ಉಡುಪಿನಲ್ಲಿ ಹೊಸ ಮೊಬೈಲ್ ಪತ್ತೆಯಾಗಿದೆ. ತಕ್ಷಣವೇ ಜೈಲಿನ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದ್ದಾರೆ.

ಪ್ರಾಥಮಿಕ ವಿಚಾರಣೆಯಲ್ಲಿ ನವ್ಯಶ್ರೀ ಹಾಗೂ ಸೃಜನ್ ಅವರು ಕೈದಿಗಳಿಗೆ ಸಂಪರ್ಕ ಸಾಧಿಸಲು ಹಾಗೂ ನಿರ್ಬಂಧಿತ ವಸ್ತುಗಳನ್ನು ಪೂರೈಸಲು ಈ ಮೊಬೈಲ್ ಬಳಕೆಯಾಗಬೇಕೆಂದು ಯತ್ನಿಸಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆ ನಂತರ ಜೈಲಿನ ಭದ್ರತಾ ವ್ಯವಸ್ಥೆಯ ಕುರಿತು ಪ್ರಶ್ನೆಗಳು ಮೂಡಿದ್ದು, ಹೆಚ್ಚಿನ ತನಿಖೆಗಾಗಿ ಪೊಲೀಸರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಮನವಿ ಮಾಡಿದ್ದಾರೆ.

Related News

error: Content is protected !!