ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಪೊಲೀಸರು ಹೊಣೆ ಎಂಬ ಸರ್ಕಾರಿ ನಿರ್ಧಾರದ ವಿರುದ್ಧ ಪೊಲೀಸ್ ಇಲಾಖೆ ಒಳಗೆ ಅಸಮಾಧಾನ ಭುಗಿಲೆದ್ದುಬಿಟ್ಟಿದೆ. ಈ ಕ್ರಮದಂತೆ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಸೇರಿದಂತೆ ಹಲವರನ್ನು ಅಮಾನತು ಮಾಡಲಾಗಿದ್ದು, ಇದರ ವಿರುದ್ಧ ಮಡಿವಾಳ ಠಾಣೆಯ ಹೆಡ್ ಕಾನ್ಸ್ಟೇಬಲ್ ನರಸಿಂಹರಾಜು ಅನನ್ಯ ರೀತಿಯಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ರಾಜಭವನದ ಎದುರು ಅಂಬೇಡ್ಕರ್ ಭಾವಚಿತ್ರವೊಂದನ್ನು ಹಿಡಿದು ನಿಂತ ಅವರು, “ನಮ್ಮ ಕಮಿಷನರ್ ವಿರುದ್ಧದ ಕ್ರಮವನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು,” ಎಂಬ ಘೋಷಣೆ ಕೂಗಿದರು. ಆರ್ಸಿಬಿ ತಂಡದ ಸನ್ಮಾನ ಕಾರ್ಯಕ್ರಮವನ್ನು ತುರ್ತಾಗಿ ಆಯೋಜಿಸಲು ಸರ್ಕಾರವೇ ಒತ್ತಡ ಹೇರಿದ್ದರೂ, ಅದೇ ದಿನ ನಡೆದ ಅವ್ಯವಸ್ಥೆಗೂ ಹೊಣೆಗಾರರನ್ನಾಗಿ ಪೊಲೀಸರನ್ನೇ ಮಾಡಲಾಗಿದೆ ಎಂಬ ಆರೋಪ ಅವರದು.
ಸರ್ಕಾರದ ತೀರ್ಮಾನದ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ತಾವೇ ವಿಮಾನ ನಿಲ್ದಾಣಕ್ಕೆ ತೆರಳಿ ಆಟಗಾರರನ್ನು ಬರಮಾಡಿಕೊಂಡಿದ್ದರು. ಈ ಸಮಯದಲ್ಲಿ ಪೊಲೀಸ್ ಇಲಾಖೆಗೆ ಸಾಧ್ಯವಾದಷ್ಟು ಸುರಕ್ಷತೆ ನೀಡುವಂತೆ ಸೂಚನೆ ನೀಡಲಾಗಿತ್ತು. ಆದರೆ ಜನಸಂದಣಿಯಿಂದಾಗಿ ನಿಯಂತ್ರಣ ತಪ್ಪಿದ ಘಟನೆ ದುರಂತವನ್ನಾಗಿ ಮಾರ್ಪಟ್ಟಿತು.
ಪ್ರತಿಭಟನೆ ನಡೆಸಿದ ನಂತರ ವಿಧಾನಸೌಧ ಪೊಲೀಸರು ನರಸಿಂಹರಾಜು ಅವರನ್ನು ವಶಕ್ಕೆ ತೆಗೆದುಕೊಂಡು, ಮತ್ತೆ ಈ ರೀತಿಯ ವರ್ತನೆ ಮಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯ ಜೊತೆಗೆ ತಪ್ಪೊಪ್ಪಿಗೆ ಪತ್ರ ಬರೆಸಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಈ ಘಟನೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ನಡುವಿನ ನಂಬಿಕೆಯೊಳಗಿನ ಬಿರುಕು ತೋರಿಸುತ್ತಿದ್ದು, ಇದು ಮುಂದೆ ಏನೆಲ್ಲಾ ಬೆಳವಣಿಗೆಗಳಿಗೆ ದಾರಿ ಮಾಡಿಕೊಡುತ್ತದೋ ಅನ್ನುವ ಪ್ರಶ್ನೆ ಉದ್ಭವಿಸಿದೆ.
