
ಗೌರಿಬಿದನೂರು, ಜೂನ್ 5: ವಾಟಾದಹೊಸಹಳ್ಳಿ ನಿವಾಸಿ 20 ವರ್ಷದ ಜೆಸಿಬಿ ಚಾಲಕ ಶ್ರೀಧರ್ ಬಾಬು ಬುಧವಾರ ಶವವಾಗಿ ಪತ್ತೆಯಾದ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮಂಗಳವಾರ ರಾತ್ರಿ ಕೂಲಿಗೆ ತೆರಳಿದ್ದ ಯುವಕ, ಆತನ ಮುಂದಿನ ದಿನದ ಬೆಳಗ್ಗಿನ ವಾಪಾಸಿಗೆ ತಲುಪದೇ ಕಾಣೆಯಾಗಿದ್ದು, ಕೊನೆಗೆ ಅವನ ಶವ ತೊಗಲುಮೋರಿ ಬಳಿ ಪತ್ತೆಯಾಗಿದೆ.
ತೋಕಲಹಳ್ಳಿ ಗ್ರಾಮದ ಅಭಿಲಾಷ್ ಎಂಬಾತ, ನಕ್ಕಲಹಳ್ಳಿ ಗ್ರಾಮದ ಕೆರೆಯಲ್ಲಿ ಮಣ್ಣು ತೆಗೆದು ಕೊಡಬೇಕೆಂದು ಶ್ರೀಧರ್ನ್ನು ಮಂಗಳವಾರ ರಾತ್ರಿ ಕೂಲಿಗೆ ಕರೆದುಕೊಂಡು ಹೋಗಿದ್ದ. ಬುಧವಾರ ಬೆಳಗ್ಗೆ 7 ಗಂಟೆಯಾಗಿದರೂ ಯುವಕ ಮನೆಗೆ ಮರಳದ ಹಿನ್ನೆಲೆಯಲ್ಲಿ ಆತಂಕಗೊಂಡ ಪೋಷಕರು ಹುಡುಕಾಟ ಆರಂಭಿಸಿದ್ದರು.
ಅವಕಾಶದಿಂದಲೇ ಕಾಟನಕಲ್ಲು–ಪೆದ್ದನಹಳ್ಳಿ ರಸ್ತೆಯ ನಡುವೆ ಇರುವ ತೊಗಲುಮೋರಿಯ ಬಳಿ ಕಾರಿನ ಅಪಘಾತವಾಗಿದೆ ಎಂಬ ಮಾಹಿತಿ ಸ್ನೇಹಿತರಿಂದ ಬಂದಿತು. ಆದರೆ ಘಟನೆ ಸ್ಥಳದಲ್ಲಿ ಕಂಡ ದೃಶ್ಯಗಳು ಅಪಘಾತವಲ್ಲ,ಪೂರ್ವಯೋಜಿತ ಕೊಲೆಯ ಸಾಧ್ಯತೆಗೂ ನಾಂದಿ ಹಾಡಿದವು:
*ಶವದ ತಲೆಗೆ ಭಾರೀ ಹೊಡೆತ, ಮೆದುಳು ಹೊರ ಬೀಳುವಷ್ಟು ಗಂಭೀರ ಗಾಯ
*ದೇಹದ ಮೇಲ್ಭಾಗದಲ್ಲಿ ವಾಹನದ ಚಕ್ರ ಹತ್ತಿದ ಗುರುತುಗಳು
*ಕೆರೆಯ ಅಂಚಿನಲ್ಲಿ ರಕ್ತದ ಕಲೆಗಳು ಹಾಗೂ ಮಾಂಸದ ತುಂಡುಗಳು
ಈ ಹಿನ್ನೆಲೆಯೊಳಗೆ, ಮೃತನ ಅಣ್ಣ ನಾಗೇಂದ್ರ ಬಾಬು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, “ತಮ್ಮನನ್ನು ಕೊಲೆ ಮಾಡಿ, ಶವವನ್ನು ಕಾರಿನಲ್ಲಿ ಇಟ್ಟು ಅಪಘಾತ ಎಂದು ಬಿಂಬಿಸಲು ತೊಗಲುಮೋರಿ ಬಳಿ ಬಿಟ್ಟಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, “ಇದು ಮೇಲ್ನೋಟಕ್ಕೆ ಕೊಲೆ ಎಂದು ತೋರುತ್ತದೆ. ಅಪಘಾತವೆಂದು ತೋರಿಸಲು ಪ್ರಯತ್ನವಾಗಿದೆ. ತನಿಖೆ ಆರಂಭಿಸಲಾಗಿದೆ, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ” ಎಂದು ಹೇಳಿದರು.
ಹೆಚ್ಚುವರಿ ಎಸ್ಪಿ ಜಗ್ಗನಾಥ್ ರೈ, ಅಡಿಷನಲ್ ಎಸ್ಪಿ ಶಿವಕುಮಾರ್ ಹಾಗೂ ವೃತ್ತ ನಿರೀಕ್ಷಕ ಕೆ.ಪಿ. ಸತ್ಯನಾರಾಯಣರ ನೇತೃತ್ವದಲ್ಲಿ ತನಿಖೆ ಮುಂದುವರಿದಿದ್ದು, ಘಟನೆ ಹಿಂದೆ ಲುಕ್ಛಿಸಲಾದ ಸತ್ಯ ಬಯಲಾಗುವ ನಿರೀಕ್ಷೆ ವ್ಯಕ್ತವಾಗಿದೆ. ವರದಿ: ಅವಿನಾಶ್