
ನಂಜನಗೂಡು ತಾಲ್ಲೂಕಿನ ಸಂಗಮ ಮತ್ತು ಹುಲ್ಲಹಳ್ಳಿ ನಡುವಿನ ಮುಖ್ಯರಸ್ತೆಯ ಕಣೇನೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ದಂಪತಿ ಸೇರಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ.
ಮೃತರನ್ನು ಹಂಚೀಪುರ ಗ್ರಾಮದ ಚಿಕ್ಕಸ್ವಾಮಿ (45), ಅವರ ಪತ್ನಿ ರೂಪ (38) ಹಾಗೂ ಕಣೇನೂರು ಗ್ರಾಮದ ಚನ್ನಮಲ್ಲಮ್ಮ (55) ಎಂದು ಗುರುತಿಸಲಾಗಿದೆ.
ಚಿಕ್ಕಸ್ವಾಮಿ, ರೂಪ ಮತ್ತು ಚನ್ನಮಲ್ಲಮ್ಮ ಬೈಕ್ನಲ್ಲಿ ಶ್ರೀಕ್ಷೇತ್ರ ಸಂಗಮಕ್ಕೆ ತೆರಳಿದ್ದರು. ಪುಣ್ಯಕ್ಷೇತ್ರದ ಭೇಟಿಗೆ ನಂತರ ಒಂದು ಮದುವೆಯಲ್ಲಿ ಭಾಗವಹಿಸಿ ವಾಪಸಾಗುತ್ತಿದ್ದ ವೇಳೆ ಎದುರಿನಿಂದ ಬರುತಿದ್ದ ಲಾರಿ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಲಾರಿ ನೇರವಾಗಿ ಬೈಕ್ ಮೇಲೆ ಹತ್ತಿ ಹೋಗಿದ್ದು, ಮುಂಭಾಗದ ಚಕ್ರ ಮೃತದೇಹಗಳ ಮೇಲೆ ಹರಿದ ಪರಿಣಾಮ ಮೂವರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಘಟನೆಯ ಮಾಹಿತಿ ಲಭ್ಯವಾದ ಕೂಡಲೆ ಎಎಸ್ಪಿ ಮಲ್ಲಿಕ್, ಡಿವೈಎಸ್ಪಿ ರಘು, ಪಿಎಸ್ಐ ಚೇತನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಪಘಾತಕ್ಕೊಳಗಾದ ಲಾರಿ ತಮಿಳುನಾಡು ನೋಂದಾಯಿತವಾಗಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮಿಗಿಲು ಮುಟ್ಟಿದ್ದು, ಮನಕಲಕುವ ದೃಷ್ಯ ಉಂಟಾಗಿತ್ತು. ವರದಿ: ಮೋಹನ್