
ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನಲ್ಲಿ ರೈತನೊಬ್ಬನಿಗೆ ಪೋಡಿ ಮಾಡಿಕೊಡುವ ನಿಟ್ಟಿನಲ್ಲಿ ಲಂಚ ಬೇಡಿಕೆಯಿಟ್ಟಿದ್ದ ಸರ್ವೆ ಕಚೇರಿ ಮೇಲ್ವಿಚಾರಕನ ವಿರುದ್ಧ ಲೋಕಾಯುಕ್ತ ದಾಳಿ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ವಕೀಲ ಸೋಮನಾಥ್ ಅವರ ದೂರಿನ ಆಧಾರದಲ್ಲಿ ಲೋಕಾಯುಕ್ತ ಡಿವೈಎಸ್ಪಿ ಜೆ.ಎಚ್. ಇನಾಮದಾರ ಅವರ ನೇತೃತ್ವದಲ್ಲಿ ಬುಧವಾರ ದಾಳಿ ನಡೆದಿದೆ. ಸರ್ವೆ ಮೇಲ್ವಿಚಾರಕ ಮಲ್ಲಿಕಾರ್ಜುನ ಎಂಬವರು ಫಾರಂ ನಂ.10 ರ ಮೂಲಕ ಪೋಡಿ ಪ್ರಕ್ರಿಯೆ ಮಾಡಲು ₹20,000 ಲಂಚವನ್ನು ರೈತನಿಂದ ಬೇಡಿದ್ದಾಗಿ ಆರೋಪಿಸಲಾಗಿದೆ. ಈ ಪೈಕಿ ₹19,000 ಮೊತ್ತವನ್ನು ಫೋನ್ ಪೇ ಮೂಲಕ ಪಡೆದಿರುವುದೂ ದೃಢಪಟ್ಟಿದೆ.
ಘಟನೆಯ ಕುರಿತು ಪರಿಶೀಲನೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಮಲ್ಲಿಕಾರ್ಜುನ ಅವರನ್ನು ವಶಕ್ಕೆ ಪಡೆದು, ವಿಚಾರಣೆಗೆ ಒಳಪಡಿಸಿದ್ದಾರೆ.
“ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿಯನ್ನು ಮುಂದಿನ ಹಂತದಲ್ಲಿ ಪ್ರಕಟಿಸಲಾಗುವುದು,” ಎಂದು ಡಿವೈಎಸ್ಪಿ ಇನಾಮದಾರ ತಿಳಿಸಿದ್ದಾರೆ.