ಮೈಸೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದಿದ್ದ ಯುವಕನ ಭೀಕರ ಹತ್ಯೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚಿನ್ನದ ಸರ ಕಳವು ಮಾಡಿದ ಕಾರಣಕ್ಕೆ ಗೆಳೆಯನೇ ಯುವಕನನ್ನು ಹತ್ಯೆಗೈದು, ಶವ ಸುಟ್ಟು ನಾಶಪಡಿಸಿದ್ದ ಕ್ರೂರತೆಯ ಹಿಂದೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಇನ್ನೂ ಎಸ್ಕೇಪ್ ಆಗಿದ್ದಾನೆ.

ಹತ್ಯೆಯಾದ ಯುವಕ ಚಾಮರಾಜನಗರ ಜಿಲ್ಲೆಯ ಬ್ಯಾಡರಪುರದ ನಿವಾಸಿ ಮೋಹನ್ ಕುಮಾರ್ (31). ಮೈಸೂರಿನ ಬೋಗಾದಿಯ ಲಾಡ್ಜ್‌ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಅದೇ ಲಾಡ್ಜ್‌ಗೆ ಇಸ್ಪೀಟ್ ಆಟವಾಡಲು ಬರುತ್ತಿದ್ದ ಶ್ರೀನಿವಾಸ್ ಎಂಬಾತನು, ಜೂಜಿಗೆ ಬೇಕೆಂದು ತನ್ನ ಪತ್ನಿಯ 60 ಗ್ರಾಂ ಚಿನ್ನದ ಸರ ತಂದಿದ್ದ. ಆದರೆ ಆ ಚಿನ್ನದ ಸರವನ್ನು ಮೋಹನ್ ಕುಮಾರ್ ಕದ್ದಿದ್ದಾನೆ ಎಂಬ ಶಂಕೆಯಿಂದ ಶ್ರೀನಿವಾಸ್ ಕೋಪಗೊಂಡಿದ್ದ.

ಚಿನ್ನ ಕಳವು ಮಾಡಿದ ಮೋಹನ್ ಕುಮಾರ್, ಅದನ್ನು ಗಿರವಿಯಾಗಿ ಇಟ್ಟು ತನ್ನ ಸ್ವಗ್ರಾಮ ಬ್ಯಾಡರಪುರಕ್ಕೆ ತೆರಳಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ ಎಂಬ ಮಾಹಿತಿ ಶ್ರೀನಿವಾಸನಿಗೆ ದೊರಕಿದ ನಂತರ, ಆತ ತನ್ನ ಗೆಳೆಯರ ಜತೆಗೂಡಿ ಪ್ಲಾನ್ ರೂಪಿಸುತ್ತಾನೆ.

ಮೋಹನ್ ಕುಮಾರ್ನನ್ನು ಮನೆಯಿಂದ ಕರೆದು, ಕಾರಿನಲ್ಲಿ ಎಳೆದೊಯ್ದು ಮಾರಕವಾಗ ಹಲ್ಲೆ ಮಾಡಿ ಹತ್ಯೆ ಮಾಡಲಾಗುತ್ತದೆ. ಬಳಿಕ ಶವವನ್ನು ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಸುಟ್ಟು ಹಾಕಿ ಆರೋಪಿಗಳು ಪರಾರಿಯಾಗುತ್ತಾರೆ.

ಈ ಕುರಿತು ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಿರುಸಿನ ತನಿಖೆ ನಡೆಸಿದ ಫಲವಾಗಿ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಹತ್ಯೆ ಪ್ರಕರಣದ ಪ್ರಮುಖ ಮಾಸ್ಟರ್‌ಮೈಂಡ್ ಶ್ರೀನಿವಾಸ್ ಇನ್ನೂ ಪರಾರಿಯಾಗಿದ್ದು, ಪೊಲೀಸರು ಅವನ ಶೋಧ ಕಾರ್ಯ ಮುಂದುವರಿಸಿದ್ದಾರೆ.

 

Related News

error: Content is protected !!