ಹುಬ್ಬಳ್ಳಿಯ ತೊರವಿ ಹಕ್ಕಲ ಪ್ರದೇಶದಲ್ಲಿ ತಾಯಿಯೊಬ್ಬರು ತನ್ನ ಮಗನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಕಾರಣದ ಮೇಲೆ ಮಗನಿಂದಲೇ ಹತ್ಯೆಗೀಡಾದ ಭೀಕರ ಘಟನೆ ನಡೆದಿದೆ. ಈ ದುರ್ಘಟನೆ ಗುರುವಾರ ತಡರಾತ್ರಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

46 ವರ್ಷದ ಪದ್ಮಾ ಎಂಬ ಮಹಿಳೆ ಗಂಡ ಶ್ರೀನಿವಾಸ ಹಾಗೂ ಇಬ್ಬರು ಗಂಡು ಮಕ್ಕಳೊಂದಿಗೆ ವಾಸವಾಗುತ್ತಿದ್ದಳು. ಪದ್ಮಾಳ ಮೊದಲ ಮಗ ಮಂಜುನಾಥ್, ಈಗಾಗಲೇ ವಿವಾಹವಾದವನಾಗಿದ್ದರೂ, ಮತ್ತೊಬ್ಬ ಯುವತಿಯ ಜೊತೆ ಅನೈತಿಕ ಸಂಬಂಧವನ್ನು ಹೊಂದಿದ್ದ. ಇದನ್ನು ತಿಳಿದ ತಾಯಿ ಪದ್ಮಾ, ಮಗನಿಗೆ ನಿಷ್ಠುರ ಸಲಹೆ ನೀಡಲು ಮುಂದಾಗಿ, “ಮಗನೆ, ನಿನಗೆ ಹೆಂಡತಿಯಿದ್ದರೂ ಬೇರೆ ಯುವತಿಯ ಜೊತೆ ಇರುವಂತದು ತಪ್ಪು, ನೀನು ಉತ್ತಮ ವ್ಯಕ್ತಿಯಾಗಿ ಬದುಕು” ಎಂದು ಬುದ್ಧಿವಾದ ಹೇಳಲು ಯತ್ನಿಸಿದ್ದಳು.

ಆದರೆ ಈ ಮಾತು ಮಂಜುನಾಥನಿಗೆ ಅಷ್ಟೆಂದರೆ ಬೇಸರವಾಯಿತು. ತಾಯಿಯ ಮಾತಿಗೆ ಕೋಪಗೊಂಡ ಮಂಜು, ತಾಯಿ ಜೊತೆ ಜಗಳ ಆರಂಭಿಸಿದ. ಈ ವೇಳೆ ಪದ್ಮಾಳ ಗಂಡ ಶ್ರೀನಿವಾಸ ಮತ್ತು ಮತ್ತೊಬ್ಬ ಮಗ ಲಕ್ಷ್ಮಣ್ ಮಧ್ಯಪ್ರವೇಶಿಸಿ ಜಗಳ ತಡೆಯಲು ಯತ್ನಿಸಿದರು. ಮಾತಿಗೆ ಮಾತು ಬೆಳೆದ ಪರಿಣಾಮ, ಕೋಪಗೊಂಡ ಮಂಜುನಾಥ್ ತಮ್ಮ ಸಹೋದರ ಲಕ್ಷ್ಮಣ್ ಮೇಲೆ ಕಿಟಕಿಯ ಗಾಜು ಬಳಸಿಕೊಂಡು ಹಲ್ಲೆ ಮಾಡಲು ಮುಂದಾಗಿದ್ದ. ಈ ಕ್ಷಣದಲ್ಲಿ ಇಬ್ಬರ ನಡುವೆ ನಡೆಯುತ್ತಿದ್ದ ಜಗಳ ತಡೆಯಲು ಪದ್ಮಾ ಮುಂದಾಗಿದ್ದಾಗ, ಮಂಜುನಾಥ್ ಆಕೆಯ ಬೆನ್ನಿನ ಭಾಗಕ್ಕೆ ಗಾಜಿನಿಂದ ಇರಿದಿದ್ದಾನೆ.

ಈ ಆಕ್ರಮಣದಿಂದ ಗಂಭೀರವಾಗಿ ಗಾಯಗೊಂಡ ಪದ್ಮಾಳನ್ನು ತಕ್ಷಣವೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಶುಕ್ರವಾರ ಬೆಳಿಗ್ಗೆ 7 ಗಂಟೆ ಸಮಯದಲ್ಲಿ ಪದ್ಮಾ ಮರಣ ಹೊಂದಿದಳು.

ಘಟನೆ ಬಗ್ಗೆ ಮಾಹಿತಿ ತಿಳಿದ ಕಮರಿಪೇಟೆ ಠಾಣಾ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿದ್ದಾರೆ. ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ನಡುವೆ, ಆರೋಪಿಯಾದ ಮಂಜುನಾಥ್ ಅನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ಇಡೀ ಘಟನೆಯಿಂದ ತೊರವಿ ಹಕ್ಕಲ ಪ್ರದೇಶದಲ್ಲಿ ಭಾರೀ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ವರದಿ: ಶಿವು ಪಿ.ಆರ್.

Related News

error: Content is protected !!