
ಬೆಂಗಳೂರು ನಗರದಲ್ಲಿ ನಿಷಿದ್ಧ ಶಸ್ತ್ರಾಸ್ತ್ರಗಳ ಅಕ್ರಮ ಮಾರಾಟದ ಜಾಲವನ್ನು ಭೇದಿಸಿರುವ ಸಿಸಿಬಿಯ ಸಂಘಟಿತ ಅಪರಾಧ ದಳದ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ನಾಡ ಬಂದೂಕು, ಪಿಸ್ತೂಲ್ ಮತ್ತು ಜೀವಂತ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತರೆಂದರೆ, ಬೆಂಗಳೂರು ಮೂಲದ ರೌಡಿಶೀಟರ್ ಸಮೀರ್ ಅಲಿಯಾಸ್ ಶೂಟರ್ ಸಮೀರ್ ಹಾಗೂ ಪಂಜಾಬ್ನ ಹರ್ಪಾಲ್ ಸಿಂಗ್. ಪೊಲೀಸರು ಆರೋಪಿಗಳಿಂದ ಒಂದು ನಾಡ ಬಂದೂಕು, ಒಂದು ಪಿಸ್ತೂಲ್ ಹಾಗೂ ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಮಾಹಿತಿಯಂತೆ, ಹರ್ಪಾಲ್ ಸಿಂಗ್ ಪಂಜಾಬ್ನಿಂದ ಕಡಿಮೆ ದರಕ್ಕೆ ಶಸ್ತ್ರಾಸ್ತ್ರಗಳನ್ನು ಖರೀದಿಸಿ ಸಮೀರ್ಗೆ ಪೂರೈಸುತ್ತಿದ್ದ. ಬಳಿಕ ಸಮೀರ್ ಅವುಗಳನ್ನು ಬೆಂಗಳೂರು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.
ಖಚಿತ ಮಾಹಿತಿಯ ಮೇರೆಗೆ ಸಿಸಿಬಿ ಪೊಲೀಸರು ದೇವರಜೀವನಹಳ್ಳಿಯ ಸ್ವತಂತ್ರನಗರದ ಮುಖ್ಯ ರಸ್ತೆಯಲ್ಲಿ ಸಮೀರ್ನನ್ನು ಮುತ್ತಿಗೆ ಹಾಕಿ ಬಂಧಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಶಸ್ತ್ರಾಸ್ತ್ರ ಸರಬರಾಜು ಜಾಲದ ಹಿಂದಿನ ಬಂಧಗಳನ್ನು ವಿಸ್ತಾರವಾಗಿ ತನಿಖೆ ನಡೆಸುತ್ತಿದ್ದಾರೆ.