
ಯಾದಗಿರಿ ಜಿಲ್ಲೆಯ ತೋಟಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಈರುಳ್ಳಿ ಶೇಡ್ ನಿರ್ಮಾಣಕ್ಕಾಗಿ ಸಬ್ಸಿಡಿ ಬಿಡುಗಡೆ ಸಂಬಂಧ ಹಣದ ಲಂಚ ಬೇಡಿಕೆ ಇಟ್ಟು, ಅದರಲ್ಲಿ ಭಾಗಶಃ ಹಣವನ್ನು ಫೋನ್ ಪೇ ಮೂಲಕ ಸ್ವೀಕರಿಸಿದ್ದ ಸಹಾಯಕ ನಿರ್ದೇಶಕ ಶಿವದತ್ತ, ಲೋಕಾಯುಕ್ತ ಪೊಲೀಸರ ಜಾಲಕ್ಕೆ ಬಿದ್ದಿದ್ದಾರೆ.
ಬದ್ದೆಪಲ್ಲಿ ಗ್ರಾಮದ ರೈತ ಶಂಕರಪ್ಪ ಅವರು ಈರುಳ್ಳಿ ಶೇಡ್ ನಿರ್ಮಿಸಿದ್ದಕ್ಕಾಗಿ ಸರ್ಕಾರದಿಂದ 80 ಸಾವಿರ ರೂಪಾಯಿ ಸಬ್ಸಿಡಿ ಮಂಜೂರಾಗಿತ್ತು. ಆದರೆ ಈ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಅಧಿಕಾರಿಯಾದ ಶಿವದತ್ತ ಅವರು 20 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ಇಂದು (ಗುರುವಾರ) ಅಧಿಕಾರಿಯು ಶಂಕರೆಪ್ಪನಿಗೆ ಲಂಚ ಹಣ ಜಮೆ ಮಾಡಲು ಫೋನ್ ಪೇ ನಂಬರ್ ಒದಗಿಸಿದ್ದು, ರೈತ 5 ಸಾವಿರ ರೂಪಾಯಿ ಹಣವನ್ನು ಆನ್ಲೈನ್ ಮೂಲಕ ವರ್ಗಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರೈತ ಶಂಕರೆಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸರು ತಕ್ಷಣ ಕ್ರಮ ಕೈಗೊಂಡು, ಯಾದಗಿರಿಯ ಅಂಬೇಡ್ಕರ್ ನಗರದಲ್ಲಿರುವ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲ ಡಾಕ್ಯುಮೆಂಟ್ಗಳ ಪರಿಶೀಲನೆ ನಡೆಸಿ ಮಹತ್ವದ ದಾಖಲೆಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.
ಲೋಕಾಯುಕ್ತ ಎಸ್ಪಿ ಬಿ.ಕೆ. ಉಮೇಶ್ ಹಾಗೂ ಡಿವೈಎಸ್ಪಿ ಜೆ.ಎಚ್. ಇನಾಂದಾರ್ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಾಚರಣೆಗೆ ಪಿಐಗಳಾದ ಸಿದ್ದರಾಯ ಹಾಗೂ ಸಂಗಮೇಶ ನೇತೃತ್ವ ವಹಿಸಿದ್ದರು. ಜೊತೆಗೆ ಸಿಬ್ಬಂದಿಗಳಾದ ಸತೀಶ್, ಅಮರನಾಥ, ರಾಮುನಾಯಕ, ಮಲ್ಲಮ್ಮ, ನವೀನ್, ಗಂಗಾಧರ, ಸುಮತಿ, ಮಲ್ಲಪ್ಪ, ಖಾಸಿಂ, ಮಲ್ಲಿನಾಥ ಹಾಗೂ ಮಲ್ಲಿಕಾರ್ಜುನ ಮಡಿವಾಳ ಸಹ ಭಾಗವಹಿಸಿದ್ದರು.
ಪ್ರಸ್ತುತ ಅಧಿಕಾರಿ ಶಿವದತ್ತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.