
ಮಂಗಳೂರು ನಗರದಲ್ಲಿ ನಿನ್ನೆ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅಬ್ದುಲ್ ರಹಿಮಾನ್ ಯಾನೆ ಮೋನು ಅವರ ಅಂತಿಮ ಸಂಸ್ಕಾರ ಇಂದು ಬೆಳಗ್ಗೆ ಕಠಿಣ ಪೊಲೀಸ್ ಬಂದೋಬಸ್ತ್ ನಡುವೆಯೇ ನೆರವೇರಿತು.
ಮೃತದೇಹವನ್ನು ಮಂಗಳೂರಿನ ಕುತ್ತಾರ್ ಪ್ರದೇಶದಲ್ಲಿರುವ ಮದನಿ ನಗರ ಮಸೀದಿಗೆ ಕರೆತರಲಾಗಿದ್ದು, ಅಲ್ಲಿ ಮಯ್ಯತ್ ಸ್ನಾನ ನೆರವೇರಿಸಲಾಯಿತು. ಬಳಿಕ ಮಸೀದಿಯಲ್ಲಿಯೇ ಮಯ್ಯತ್ ನಮಾಝ್ ನೆರವೇರಿತು. ನಮಾಝ್ ಬಳಿಕ ಮೃತದೇಹವನ್ನು ಪೊಲೀಸ್ ಭದ್ರತೆಯೊಂದಿಗೆ ಕೊಳತ್ತಮಜಲಿಗೆ ಸಾಗಿಸಲಾಯಿತು.
ಕುತ್ತಾರ್, ತೊಕ್ಕೊಟ್ಟು, ಪಂಪ್ವೆಲ್, ಮಿತ್ತಬೈಲ್ ಮಾರ್ಗವಾಗಿ ಮೃತದೇಹವನ್ನು ಕೊಳತ್ತಮಜಲಿಯಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಯಿತು. ಬಳಿಕ ಅಲ್ಲಿನ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಆವರಣದಲ್ಲಿ ದಫನ ವಿಧಿ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹಾಗೂ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಬಂದೋಬಸ್ತ್ ನಿರ್ವಹಿಸಿದರು. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಕಟ್ಟುನಿಟ್ಟಾದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.