
ಧಾರವಾಡ: ಧಾರವಾಡ ಬಸ್ ನಿಲ್ದಾಣ ಹಾಗೂ ನಗರದಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಂತರ್ ರಾಜ್ಯದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೂಲದವರಾಗಿದ್ದಾರೆ.
ಧಾರವಾಡ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗ್ಗಳನ್ನು ಕದಿಯುತ್ತಿದ್ದ ತಮಿಳುನಾಡಿನ ತಿರುಚನಪಳ್ಳಿ ಮೂಲದ 37 ವರ್ಷದ ಮಹಿಳೆ ಗುನಾ ಮೀನಾಚಿ ಸಕ್ತಿ ಮತ್ತು ಮನೆ ಕಳ್ಳತನಗಳಲ್ಲಿ ತೊಡಗಿದ್ದ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ 46 ವರ್ಷದ ಕಾಮೇಪಲ್ಲಿ ಶ್ರೀನಿವಾಸ್ ಎಂಬವರನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಈ ಇಬ್ಬರು ಆರೋಪಿಗಳು ಧಾರವಾಡ ಉಪನಗರ ಪೊಲೀಸ್ ಠಾಣೆಯ ಎರಡು ಕಳ್ಳತನ ಪ್ರಕರಣಗಳು ಹಾಗೂ ಹುಬ್ಬಳ್ಳಿಯ ಗೋಕುಲ್ ರಸ್ತೆ ಪೊಲೀಸ್ ಠಾಣೆಯ ಒಂದು ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ತನಿಖೆಯಿಂದ ಹೊರಬಂದಿದೆ.
ಬಂಧಿತರಿಂದ 100 ಗ್ರಾಂ ಬಂಗಾರದ ಆಭರಣಗಳು ಮತ್ತು 750 ಗ್ರಾಂ ಬೆಳ್ಳಿಯ ಆಭರಣಗಳು ಸೇರಿದಂತೆ 9.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪ್ರಸ್ತುತ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದ್ದು, ಇವರ ವಿರುದ್ಧ ಹೆಚ್ಚಿನ ತನಿಖೆ ಮುಂದುವರಿದಿದೆ. ಇತರ ಕಳ್ಳತನ ಪ್ರಕರಣಗಳ ಜಾಲವನ್ನು ಬಯಲಿಗೆ ಎಳೆಯುವ ದೃಷ್ಟಿಯಿಂದ ವಿಚಾರಣೆ ನಡೆಯುತ್ತಿದೆ.