
ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ 9ನೇ ಮುಖ್ಯ ರಸ್ತೆಯಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಬ್ರೇಕ್ ಫೇಲ್ ಆದ ಆಯಂಬುಲೆನ್ಸ್ವೊಂದು ತರಕಾರಿ ಅಂಗಡಿಗೆ ನುಗ್ಗಿದ ಪರಿಣಾಮ ಓರ್ವ ವ್ಯಾಪಾರಿ ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ.
ಮೃತ ವ್ಯಕ್ತಿಯನ್ನು ರಮೇಶ್ (49) ಎಂದು ಗುರುತಿಸಲಾಗಿದೆ. ಅವರು ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಪಘಾತದ ವೇಳೆ ಅಂಗಡಿಯಲ್ಲಿ ಇದ್ದಾಗ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಆಯಂಬುಲೆನ್ಸ್ನಲ್ಲಿ ಯಾವುದೇ ರೋಗಿ ಇರಲಿಲ್ಲದರೂ, ಚಾಲಕ ಅತಿವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದ ಎನ್ನಲಾಗಿದೆ. ನಿರೀಕ್ಷೆಗೆ ವಿರುದ್ಧವಾಗಿ ಆಯಂಬುಲೆನ್ಸ್ಗೆ ಬ್ರೇಕ್ ಫೇಲ್ ಆಗಿದ್ದು, ನೇರವಾಗಿ ತರಕಾರಿ ಅಂಗಡಿಗೆ ನುಗ್ಗಿದೆ. ಈ ವೇಳೆ ಎರಡು ತಳ್ಳುವ ಗಾಡಿಗಳು ಹಾಗೂ ಒಂದು ಆಟೋಕ್ಕೆ ಸಹ ಹಾನಿಯಾಗಿದೆ.
ಘಟನೆಗೆ ಕೋಪಗೊಂಡ ಸ್ಥಳೀಯರು ಆಯಂಬುಲೆನ್ಸ್ ಚಾಲಕ ಚಿರಂಜೀವಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ನಂತರ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.