
ಮಂಗಳೂರು: ಕಾವೂರು ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಜೆ ತಲವಾರು ತೋರಿಸಿ ಇಬ್ಬರು ನಾಗರಿಕರನ್ನು ಬೆದರಿಸಿರುವ ಘಟನೆ ವರದಿಯಾಗಿದೆ. ಸಂಘಪರಿವಾರದ ಕಾರ್ಯಕರ್ತ ಹಾಗೂ ರೌಡಿ ಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಈ ಘಟನೆ ನಡೆದಿರುವುದರಿಂದ ಸ್ಥಳೀಯರಲ್ಲೂ ಆತಂಕ ಮನೆಮಾಡಿದೆ.
ಪಂಜಿಮೊಗರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಂಜಿಮೊಗರು ನಿವಾಸಿ ಮೊಯ್ದಿನಬ್ಬ (37) ಮತ್ತು ಶಾಂತಿನಗರದ ನಾಸಿರ್ (38) ಎಂಬವರನ್ನು ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ತಲವಾರು ತೋರಿಸಿ ಬೆದರಿಸಿದ್ದಾರೆ. ಅವರು ಹೆಲ್ಮೆಟ್ ಧರಿಸಿದ್ದಾಗಿದ್ದು, ತಲವಾರು ಹಾಯಿಸಿ ಬೆದರಿಕೆಯುಂಟುಮಾಡಿ ಸ್ಥಳದಿಂದ ಪರಾರಿಯಾದರೆನ್ನಲಾಗಿದೆ.
ಈ ಬಗ್ಗೆ ಸಂತ್ರಸ್ತರು ಕಾವೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, “ನಮ್ಮ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಲಾಗಿತ್ತು” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. ಘಟನೆಯು ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ್ದು, ಪೊಲೀಸರಿಂದ ಹೆಚ್ಚಿನ ಪೇಟ್ರೋಲಿಂಗ್ ಕೈಗೊಳ್ಳಲಾಗಿದೆ.