ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲ್ಲೂಕಿನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಯುವಕನೊಬ್ಬ ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿರುವ ಮಾಹಿತಿ ಹೊರಬಿದ್ದಿದ್ದು, ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಸ್‌ಐ ವರ್ಷಾ ವಿರುದ್ಧ ದುಷ್ಯಂತ್ ಎಂಬ ಯುವಕ ಕಿರುಕುಳಕ್ಕೆ ಒಳಗಾಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಲವು ದಿನಗಳಿಂದ ಪಿಎಸ್‌ಐ ವರ್ಷಾ ಅವರು ದುಷ್ಯಂತ್ ಮೇಲೆ ಅನಾವಶ್ಯಕ ಒತ್ತಡ ತರುವ ಮೂಲಕ ಮಾಸ್ಕಾಗಿ ಕಿರುಕುಳ ನೀಡುತ್ತಿದ್ದರು ಎಂಬುದಾಗಿ ದೂರಲಾಗಿದೆ.

ತಮ್ಮ ಮಗನನ್ನು ಪದೇ ಪದೇ ಠಾಣೆಗೆ ಕರೆಸಿ, ‘ಎನ್‌ಕೌಂಟರ್’ ಮಾಡುವುದಾಗಿ ಬೆದರಿಸುತ್ತಿದ್ದ ಪಿಎಸ್‌ಐ, ನಿನ್ನೆ ದುಷ್ಯಂತ್ ಮನೆಗೆ ಹೋಗಿ ತಾಯಿ ರಾಧಿಕಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದರೆಂದು ಕುಟುಂಬದವರು ಆರೋಪಿಸಿದ್ದಾರೆ. ಹಣ ನೀಡದಿದ್ದರೆ ರೌಡಿಶೀಟ್ ತೆರೆಯುವುದಾಗಿ ಬೆದರಿಕೆ ಹಾಕಿರುವುದು ಕೂಡ ಈ ಪ್ರಕರಣದಲ್ಲಿ ಬೆಳಕಿಗೆ ಬಂದಿದೆ.

ಯುವಕರೊಂದಿಗೆ ಈ ಹಿಂದೆ ನಡೆದಿದ್ದ ಸಣ್ಣಪುಟ್ಟ ಗಲಾಟೆ ಘಟನೆಯನ್ನು ಅಡಿಗೆ ಮಾಡಿ, ಪಿಎಸ್‌ಐ ವರ್ಷಾ ದುಷ್ಯಂತ್ ಮೇಲೆ ನಿರಂತರವಾಗಿ ಒತ್ತಡ ತರುವ ಮೂಲಕ ಮಾನಸಿಕವಾಗಿ ಹಿಂಸಿಸುತ್ತಿದ್ದರೆಂದು ಸ್ಥಳೀಯರು ಹೇಳಿದ್ದಾರೆ. ಇವುಗಳ ಪರಿಣಾಮವಾಗಿ ದುಷ್ಯಂತ್ ಮದ್ಯದೊಂದಿಗೆ ಡೊಮ್ಯಾಕ್ಸ್ ಮಿಶ್ರಣ ಮಾಡಿ ಸೇವನೆ ಮಾಡುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣವೇ ದುಷ್ಯಂತ್‌ನನ್ನು ಕೊಳ್ಳೆಗಾಲದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯ ಐಸಿಯುವಿಗೆ ಸ್ಥಳಾಂತರಿಸಲಾಗಿದೆ.

ಈ ಘಟನೆಯ ನಡುವೆಯೇ, ದುಷ್ಯಂತ್ ಬಾರ್‌ನಲ್ಲಿ ಇತರರೊಂದಿಗೆ ಕಿರಿಕ್ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಈ ವಿಡಿಯೋವನ್ನು ಪಿಎಸ್‌ಐ ವರ್ಷಾ ತಾವೇ ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಹರಡಿದೆ. ಈ ಹಿನ್ನೆಲೆಯಲ್ಲಿ ಕೊಳ್ಳೆಗಾಲ ಠಾಣೆಯಲ್ಲಿ ಪಿಎಸ್‌ಐ ವರ್ಷಾ ವಿರುದ್ಧ ಅಧಿಕೃತ ದೂರು ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ಇಲಾಖೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಪ್ರಕರಣದ ಹಿನ್ನೆಲೆ ತಿಳಿದು ತನಿಖೆ ಮುಂದುವರಿಸಲಾಗುತ್ತಿದೆ.

Related News

error: Content is protected !!