
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಅಂಗಡಿ ಜಾಗದ ವಿಚಾರವಾಗಿ ಉದ್ಭವಿಸಿದ ವೈಷಮ್ಯ ಪರಾಕಾಷ್ಠೆಗೆ ತಲುಪಿದ್ದು, ಎರಡು ಗುಂಪುಗಳು ನಡು ರಸ್ತೆಯಲ್ಲೇ ಪರಸ್ಪರ ಹಲ್ಲೆಗೆ ಇಳಿದಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳೀಯರ ಹೇಳಿಕೆಯಂತೆ, ಅಂಗಡಿಯ ಜಾಗಕ್ಕಾಗಿ ಉಂಟಾದ ವಿವಾದ ತೀವ್ರ ರೂಪ ಪಡೆದು, ಎರಡು ಗುಂಪುಗಳು ರಾಡ್ಗಳು ಸೇರಿದಂತೆ ತೀವ್ರವಾಗಿ ಪರಸ್ಪರ ಹಲ್ಲೆ ನಡೆಸಿದವು. ಈ ಗಲಾಟೆಯಲ್ಲಿ ಮಹಿಳೆಯರು ಕೂಡ ಭಾಗವಹಿಸಿದ್ದು, ನಡು ರಸ್ತೆಯಲ್ಲೇ ಹೊಡೆದಾಟ ನಡೆದಿದೆ.
ಘಟನೆಯಲ್ಲಿ ಅಪೀಸ್ ವುಲ್ಲಾಖಾನ್ ಎಂಬುವರ ಮೇಲೆ ಸುಲ್ತಾನ್, ಕೌಸರ್, ಅಲೀಮ್, ನಿಸಾಮ್ ಹಾಗೂ ಇರ್ಪಾನ್ ಎಂಬವರು ಹಲ್ಲೆ ನಡೆಸಿದರೆಂದು ಆರೋಪ ಕೇಳಿ ಬಂದಿದೆ. ಈ ಗಲಾಟೆಯಲ್ಲಿ ಎರಡೂ ಗುಂಪಿನ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಚಿಂತಾಮಣಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ಸಂಬಂಧ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಗ್ರಾಮದ ಶಾಂತತೆಗೆ ಧಕ್ಕೆಯಾದ ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.