
ಕಾರವಾರದಲ್ಲಿ ಜನರ ಮಧ್ಯೆ, ನಡು ರಸ್ತೆಯಲ್ಲಿ ನಡೆದ ಭಯಾನಕ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ನಗರಸಭೆಯ ಮಾಜಿ ಸದಸ್ಯ ಸತೀಶ್ ಕೊಳಂಬಕರ ಇಂದು ಬೆಳಗ್ಗೆ ಕಾರವಾರದ ಬಿಎಸ್ಸೆನ್ನೆಲ್ ಕಚೇರಿ ಬಳಿ ನಡೆಯುತ್ತಿದ್ದ ವೇಳೆ, ಅಪರಿಚಿತ ವ್ಯಕ್ತಿಯೊಬ್ಬನು ಚಾಕುಗಳಿಂದ ಇರಿದು ಅವರನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಪ್ರತೀ ರವಿವಾರದಂತೆ ಇಂದು ಬೆಳಿಗ್ಗೆಯೂ ಸತೀಶ್ ವಾಕಿಂಗ್ಗಾಗಿ ಹೊರಟಿದ್ದರು. ಈ ವೇಳೆ ಕಾರವಾರ ಮಾರುಕಟ್ಟೆ ಬಳಿ ನಡೆದಿದ್ದ ಈ ಹೃದಯವಿದ್ರಾವಕ ಘಟನೆ, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯರು ಕಾರವಾರ ಸಂತೆಗೂ ಜೋಗಿಂಗ್ಗೂ ಸೇರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸಂದರ್ಭದಲ್ಲೇ, ಬೈಕ್ನಲ್ಲಿ ಬಂದಿದ್ದ ಹಂತಕ ಚಾಕುಗಳಿಂದ ಸತೀಶ್ರ ಮೇಲೆ ತೀವ್ರ ಹಲ್ಲೆ ನಡೆಸಿ ಅಲ್ಲಿಂದ ಪರಾರಿಯಾದ.
ಜನ ಸಾಗಣೆ ಅಧಿಕವಿದ್ದರೂ ಈ ದುಷ್ಟ ಕೃತ್ಯಕ್ಕೆ ತಡೆ ನೀಡಲಾಗದೇ ಹೋಗಿರುವುದು ಸಾರ್ವಜನಿಕರಲ್ಲಿ ಆಕ್ರೋಶ ಹುಟ್ಟಿಸಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಕೊಲೆಗಾರನ ಪತ್ತೆಗೆ ಸ್ಥಳದಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಈ ಘಟನೆಯ ಹಿನ್ನೆಲೆ ಏನು, ಕೊಲೆಗೀಡಾದ ಸತೀಶ್ರ ಜೀವನಶೈಲಿಗೆ ಸಂಬಂಧಪಟ್ಟ ಯಾವುದೇ ವೈಯಕ್ತಿಕ ಅಥವಾ ರಾಜಕೀಯ ಕಾರಣವಿದೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಕಾರವಾರದ ಹೃದಯಭಾಗದಲ್ಲಿ ನಡೆದ ಈ ಘಟನೆ ನಗರದಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆ ಎಬ್ಬಿಸಿದೆ.