
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಬಾಗಲಕುಂಟೆ ಹತ್ತಿರದ ಮುನೇಶ್ವರನಗರದಲ್ಲಿ ತಡರಾತ್ರಿ ನಡೆದಿರುವ ಭೀಕರ ಕೊಲೆ ಪ್ರಕರಣ ಸ್ಥಳೀಯರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಹಣದ ತಾಯಿಯ ಪ್ರಾಣ ಕಿತ್ತುಕೊಂಡ ಮನುಷ್ಯತ್ವ ಮರೆತ ಮಗನ ಕ್ರೂರತೆಯು ಬೆಳಕಿಗೆ ಬಂದಿದೆ.
ತಾಯಿಯ ಮೇಲೆ ಹತ್ಯೆ ಕೃತ್ಯ ಎಸಗಿದ ಆರೋಪಿ ಮಹೇಂದ್ರ ಸಿಂಗ್ ಎಂಬ ವ್ಯಕ್ತಿ, ತನ್ನ ತಾಯಿ ಶಾಂತಾಬಾಯಿ ಅವರನ್ನು ಕಬ್ಬಿಣದ ರಾಡ್ನಿಂದ ತಲೆಗೆ ಬಲವಾಗಿ ಹೊಡೆದು ಕೊಂದಿದ್ದಾನೆ. ಈ ಘಟನೆ ಮಂಗಳವಾರ ತಡರಾತ್ರಿಯಲ್ಲಿ ನಡೆದಿದೆ ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ಮಹೇಂದ್ರ ತನ್ನ ತಾಯಿಯನ್ನು ಪ್ರತಿ ದಿನ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದ. ನಿನ್ನೆ ರಾತ್ರಿ ಕೂಡಾ ಹಣದ ವಿಚಾರವಾಗಿ ತೀವ್ರ ವಾಗ್ವಾದ ನಡೆಯಿದ್ದು, ಜಗಳದ ವೇಳೆ ಕೋಪದ ಮೇಲೆ ಮಹೇಂದ್ರ ರಾಡ್ ಎತ್ತಿ ತಲೆಗೆ ಹೊಡೆದಿದ್ದಾನೆ. ತೀವ್ರ ಗಾಯಗಳಿಂದ ಶಾಂತಾಬಾಯಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆ ನಂತರ ಆರೋಪಿ ಮಹೇಂದ್ರ ಸಿಂಗ್ ಸ್ಥಳದಿಂದ ಪರಾರಿಯಾಗಿದ್ದು, ಇದೀಗ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಯುತ್ತಿದೆ.
ಈ ಪ್ರಕರಣ ಮತ್ತೊಮ್ಮೆ ಕುಟುಂಬದೊಳಗಿನ ಮಾನಸಿಕ ಒತ್ತಡ, ಆರ್ಥಿಕ ಬಿಕ್ಕಟ್ಟುಗಳು ಹೇಗೆ ದುರಂತಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ದಾರಿ ತೋರಿಸಿದೆ.