ಯಾದಗಿರಿ: ನರೇಗಾ (ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಯೋಜನೆಯಡಿ ಯಾದಗಿರಿ ತಾಲೂಕಿನ ಮಲ್ಹಾರ ಗ್ರಾಮದಲ್ಲಿ ಭಾರೀ ಅವ್ಯವಹಾರದ ಸುದ್ದಿ ಹೊರಬಿದ್ದಿದೆ. ಮಹಿಳಾ ಕಾರ್ಮಿಕರ ಹೆಸರಿನಲ್ಲಿ ಪುರುಷರು ಸೀರೆ ತೊಟ್ಟು ಕೆಲಸಕ್ಕೆ ಹಾಜರಾದಂತೆ ತೋರಿಸಿ, ಸರ್ಕಾರದ ಹಣ ಎಗರಿಸಿರುವ ಶಂಕೆ ಉಂಟಾಗಿದೆ.

ಗ್ರಾಮದ ಹತ್ತಿರದ ಪುಜಾರಿ ಎಂಬಾತನ ಹೊಲದ ಬಳಿ ನಾಲೆ ಹೂಳೆತ್ತುವ ಕಾಮಗಾರಿಗೆ ಸಂಬಂಧಿಸಿದಂತೆ ನಕಲಿ ಬಿಲ್ ತಯಾರಿಸಿ ಹಣ ವಂಚಿಸಲಾಗಿದೆ ಎನ್ನಲಾಗುತ್ತಿದೆ. ಮೂಲಗಳ ಪ್ರಕಾರ, ನೈಜ ಕಾರ್ಮಿಕರು ಕೆಲಸಕ್ಕೆ ಹಾಜರಾಗದೇ, ಪುರುಷರು ಮಹಿಳೆಯರ ಹೆಸರಿನಲ್ಲಿ ಸೀರೆ ತೊಟ್ಟು ಫೋಟೋ ತೆಗೆಯಲ್ಪಟ್ಟಿದ್ದು, ಅದನ್ನೇ ಎನ್‌ಎಂಎಂಎಸ್‌ (ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್‌) ಗೆ ಅಪ್ಲೋಡ್ ಮಾಡಲಾಗಿದೆ.

ಸರ್ಕಾರದ ನಿಯಮಾನುಸಾರ, ಕಾರ್ಮಿಕರ ದಿನಪತ್ರಿ ಹಾಜರಾತಿಯನ್ನು ಎನ್‌ಎಂಎಂಎಸ್‌ ಮೂಲಕ ದಾಖಲಿಸಬೇಕು. ಆದರೆ ಈ ಮೂಲಕವನ್ನೇ ದುರ್ಬಳಕೆ ಮಾಡಲಾಗಿದ್ದು, ಕೆಲ ಭ್ರಷ್ಟ ಅಧಿಕಾರಿಗಳ ಸಹಕಾರದಿಂದ ಈ ವಂಚನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಸಂಬಂಧವಾಗಿ ಪಂಚಾಯತ್ ಇಲಾಖೆ ಬಿಎಫ್‌ಟಿ ಅಧಿಕಾರಿ ವಿರೇಶ ಮೇಲೆ ಗಂಭೀರ ಆರೋಪಗಳು ಕೇಳಿಬಂದಿವೆ.

ಸ್ಥಳೀಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಹಾಗೂ ಎಸಿಬಿಗೆ ದೂರು ನೀಡಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಿ ಹೊತ್ತಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related News

error: Content is protected !!