ಮಂಗಳೂರು: ಮಾಟ ಮಂತ್ರ ಮಾಡಲಾಗಿದೆ ಎಂಬ ಭಯ ಮೂಡಿಸಿ, ಅದರಿಂದ ಪರಿಹಾರ ನೀಡುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದಲ್ಲದೇ, ಲಕ್ಷ ರೂಪಾಯಿಗೂ ಹೆಚ್ಚು ಹಣ ವಂಚಿಸಿದ ಆರೋಪದ ಮೇಲೆ ಮಂಗಳೂರು ಮಹಿಳಾ ಠಾಣೆ ಪೊಲೀಸರು ಗುರುವಾಯನಕೆರೆಯ ಜಿ. ಅಬ್ದುಲ್ ಕರೀಮ್ ಎಂಬಾತನನ್ನು ಬಂಧಿಸಿದ್ದಾರೆ.

2022ರಲ್ಲಿ ಮನೋವೈಕಲ್ಯದಿಂದ ಬಳಲುತ್ತಿದ್ದ ಮಹಿಳೆ, ತಮ್ಮ ಅಕ್ಕನ ಗಂಡನ ಸಲಹೆಯಂತೆ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಬಳಿ ಹೋಗಿದ್ದರು. ಕರೀಮ್, “ನಿಮ್ಮ ಮೇಲೆ ಯಾರೋ ಮಾಟ ಮಂತ್ರ ಮಾಡಿದ್ದಾರೆ. ಅದನ್ನು ನಿವಾರಣೆ ಮಾಡಬೇಕು” ಎಂದು ಹೆದರಿಸಿ, ತನ್ನ ಬಳಿ ಚಿಕಿತ್ಸೆ ಪಡೆಯುವಂತೆ ಹೇಳಿದ್ದ.

ಮಾಹಿತಿಯಂತೆ, ಪರಿಹಾರದ ನೆಪದಲ್ಲಿ ಕರೀಮ್ ಆ ಮಹಿಳೆಯನ್ನು ಮರುಮರು ತನ್ನ ಮನೆಗೆ ಬರುವಂತೆ ಮಾಡಿದ. ಪ್ರಾರಂಭದಲ್ಲಿ ಕುರ್‌ಆನ್ ಓದುತ್ತಿದ್ದ ಅಬ್ದುಲ್, ಸಮಯಾವಕಾಶ ನೋಡಿಕೊಂಡು ಮಹಿಳೆಗೆ ದೈಹಿಕ ಕಿರುಕುಳ ನೀಡಿದ. 2022ರ ಫೆಬ್ರವರಿ 10ರಂದು ಮಹಿಳೆ ಒಬ್ಬಳೇ ಕರೀಮ್ ನ ಮನೆಗೆ ಹೋದ ಸಂದರ್ಭದಲ್ಲಿ, ಕರೀಮ್ ಕುರ್‌ಆನ್ ಓದಿ ಆಕೆಯ ಮೇಲೆ ಕೈ ಹಾಕಿ ಅವಾಚ್ಯವಾಗಿ ವರ್ತಿಸಿದ್ದಾನೆ.

ಇಲ್ಲದೆ, ಚಿಕಿತ್ಸೆಗಾಗಿ ಹಣ ಬೇಕೆಂದು ಹೇಳಿ, ಹಂತ ಹಂತವಾಗಿ ಆಕೆಯಿಂದ 1 ಲಕ್ಷಕ್ಕೂ ಹೆಚ್ಚು ರೂಪಾಯಿ ಪಡೆದುಕೊಂಡಿರುವುದಾಗಿ ಮಹಿಳೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದೇ ಶೈಲಿಯಲ್ಲಿ ಕರೀಮ್ ಹಲವಾರು ಮಂದಿಗೆ ಮಾಟ ಮಂತ್ರ ಪರಿಹಾರದ ನಂಬಿಕೆ ಮೂಡಿಸಿ ಹಣ ಪಡೆದು ಮೋಸಮಾಡಿರುವ ಬಗ್ಗೆವೂ ಮಾಹಿತಿ ಲಭಿಸಿವೆ. ಮೌಢ್ಯ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು, ಆತ ಹಲವರ ಭಾವನೆಗಳ ಜೊತೆ ಆಟವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

Related News

error: Content is protected !!