ಯಾದಗಿರಿ: ಅಂಗನವಾಡಿ ಸಹಾಯಕಿಯ ಗೈರುಹಾಜರಿಯನ್ನು ಸಕ್ರಮಗೊಳಿಸಲು ಲಂಚ ಬೇಡಿದ ಪ್ರಕರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನಾ ಅಧಿಕಾರಿ (ಸಿಡಿಪಿಓ) ವನಜಾಕ್ಷಿ ಅವರು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಏಕೆ ಲಂಚದ ಬೇಡಿಕೆ?
ನಗರದ ಯಾದಗಿರಿ ಬಸ್ ನಿಲ್ದಾಣದ ಬಳಿ ನಡೆದ ಈ ದಾಳಿಯಲ್ಲಿ, ವನಜಾಕ್ಷಿ ಅವರು 80,000 ರೂಪಾಯಿ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಮೂಲಗಳ ಪ್ರಕಾರ, ಗೈರು ಹಾಜರಿಯನ್ನು ಕಾನೂನುಬದ್ದವಾಗಿ ಪರಿಗಣಿಸಿ, ಅದರಿಂದ ವೇತನ ಬಿಡುಗಡೆ ಮಾಡಲು ಅವರು ಒಂದು ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದರು.

ಲೋಕಾಯುಕ್ತರ ದಾಳಿ
ಯಾದಗಿರಿ ಲೋಕಾಯುಕ್ತ ಡಿವೈಎಸ್ಪಿ ಜೆ.ಹೆಚ್. ಇನಾಮದಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಪಿಐ ಸಿದ್ದರಾಯ, ಸಂಗಮೇಶ ಹಾಗೂ ಇತರ ಲೋಕಾಯುಕ್ತ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಮುಖ ದಾಖಲೆಗಳ ಜಪ್ತಿ ಬಳಿಕ ಆರೋಪಿಯ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಲಂಚ ಪ್ರಕರಣಗಳು ಮತ್ತಷ್ಟು ಬೆಳಕು ನೋಡುತ್ತಿವೆಯೇ?
ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರ ಹೊರಬಿದ್ದ ಘಟನೆಗಳಲ್ಲಿ ಇದು ಮತ್ತೊಂದು ಪ್ರಕರಣ. ಅಧಿಕಾರಿಗಳು ತಮ್ಮ ಹುದ್ದೆಯ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಸೇವೆಯನ್ನು ಲಂಚದ ಆಧಾರದ ಮೇಲೆ ನಿರ್ವಹಿಸುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

Related News

error: Content is protected !!