ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಣಸಘಟ್ಟ ಗ್ರಾಮದಲ್ಲಿ ರೈತರೊಬ್ಬರು ಸಾಲಭಾದೆಗೆ ತುತ್ತಾಗಿ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ನಡೆದಿದೆ. ಮಂಜಾನಾಯ್ಕ್ (45) ಎಂಬವರು ಆತ್ಮಹತ್ಯೆಗೆ ಶರಣಾಗಿರುವ ರೈತರಾಗಿದ್ದಾರೆ.

ಬ್ಯಾಂಕ್ ಸಿಬ್ಬಂದಿಯ ಮೇಲಿನ ಕಿರುಕುಳದ ಆರೋಪ

ಮಂಜಾನಾಯ್ಕ್ ಅವರು ಯೂನಿಯನ್ ಬ್ಯಾಂಕಿನಿಂದ ₹4.70 ಲಕ್ಷದ ಸಾಲ ಪಡೆದಿದ್ದರು. ಹಣ ತೀರಿಸಲು ಕಠಿಣ ಒತ್ತಡ ಎದುರಾದ ಅವರು ಬ್ಯಾಂಕಿನ ವ್ಯವಸ್ಥಾಪಕ ಕಿರಣ್ ಹಾಗೂ ಗುಮಾಸ್ತ ಪಿರೋಜಿ ಅವರಿಂದ ನಿರಂತರ ಕಿರುಕುಳ ಅನುಭವಿಸಿದ್ದರೆಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ಯಾಂಕಿನವರು ಮಂಜಾನಾಯ್ಕ್ ಅವರಿಗೆ ಲಾಯರ್ ನೋಟೀಸ್ ಕಳುಹಿಸುವ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಅವಮಾನಿಸುತ್ತಿದ್ದರು. ಈ ನಿರಂತರ ಮಾನಸಿಕ ಒತ್ತಡಕ್ಕೆ ತತ್ತರಿಸಿದ ಅವರು ಶಿವಮೊಗ್ಗದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಕೂಡಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರ ಮೃತ್ಯು ಸಂಭವಿಸಿದೆ.

ಗ್ರಾಮಸ್ಥರಿಂದ ತೀವ್ರ ಪ್ರತಿಭಟನೆ

ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಹುಣಸಘಟ್ಟ ಗ್ರಾಮಸ್ಥರು, ಆತ್ಮಹತ್ಯೆ ಮಾಡಿದ ರೈತನ ಶವವನ್ನು ಯೂನಿಯನ್ ಬ್ಯಾಂಕ್ ಎದುರು ಇಟ್ಟು ಪ್ರತಿಭಟನೆ ನಡೆಸಿದರು. ಪೊಲೀಸರ ಮಧ್ಯಸ್ಥಿಕೆಯಿಂದ ಪ್ರತಿಭಟನೆ ಶಾಂತಿಯುತವಾಗಿ ಅಂತ್ಯಗೊಂಡಿತು. ಆದರೆ ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳು ಬ್ಯಾಂಕ್ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿವೆ.

ಪೊಲೀಸರು ತನಿಖೆ ಆರಂಭಿಸಿದ್ರು

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ರೈತರ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತನಿಖೆ ಪ್ರಾರಂಭಿಸಲಾಗಿದೆ. ಈ ಮಧ್ಯೆ, ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಜನರು ಆಗ್ರಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಮತ್ತಷ್ಟು ಗಂಭೀರ ತಿರುವು ಪಡೆಯುವ ಸಾಧ್ಯತೆಯಿದೆ.

Related News

error: Content is protected !!