
ಕುಂದಾಪುರ: ಕರ್ತವ್ಯ ಲೋಪದ ಆರೋಪದ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಮಹೇಶ್ ಚಂದ್ರ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಅವರ ಮೇಲೆ ಇಲಾಖಾ ವಿಚಾರಣೆ ಮುಂದುವರಿಯಲಿದೆ.
ಉಡುಪಿ ಜಿಲ್ಲಾಧಿಕಾರಿಗಳು ಮಹೇಶ್ ಚಂದ್ರ ವಿರುದ್ಧ ಸರ್ಕಾರಕ್ಕೆ ವಿಸ್ತೃತ ವರದಿ ಸಲ್ಲಿಸಿದ್ದು, ಅದನ್ನು ಪರಿಗಣಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಹುದ್ದೆಯ ಪ್ರಭಾರವನ್ನು ಬ್ರಹ್ಮಾವರ ತಹಶೀಲ್ದಾರ್ ಶ್ರೀಕಾಂತ್ ಹೆಗ್ಡೆ ಅವರಿಗೆ ನೀಡಲಾಗಿದೆ.
ಮಹೇಶ್ ಚಂದ್ರ ಅವರು ಈ ಹುದ್ದೆಗೆ ಬಂದ ಮೇಲೆ ಹಲವಾರು ವಿವಾದಗಳಿಗೆ ಕಾರಣವಾಗಿದ್ದರು. ಅವರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳು ಕೇಳಿಬಂದಿದ್ದವು. ಸಾರ್ವಜನಿಕ ವಲಯದಲ್ಲಿ ಅವರ ನೇಮಕಾತಿಯ ಕುರಿತು ಅಸಮಾಧಾನ ವ್ಯಕ್ತವಾಗಿತ್ತು. ಹಿಂದಿನ ಶಾಸಕರೊಬ್ಬರ ಪ್ರಭಾವದಿಂದಲೇ ಈ ಹುದ್ದೆಗೆ ಅವರು ಬಂದಿದ್ದಾರೆ ಎಂಬ ಮಾತುಗಳು ಪ್ರಸಾರವಾಗಿದ್ದವು.
ಇತ್ತೀಚಿನ ವರ್ಷಗಳಲ್ಲಿ ಕುಂದಾಪುರ ಉಪವಿಭಾಗಾಧಿಕಾರಿ ಹುದ್ದೆಯ ಬಗ್ಗೆ ಹಲವು ಚರ್ಚೆಗಳು ನಡೆದಿದ್ದು, ಈ ಹುದ್ದೆಯಲ್ಲಿದ್ದ ರಶ್ಮಿ ಅವರ ಆಕಸ್ಮಿಕ ವರ್ಗಾವಣೆ ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿತ್ತು. ಈಗ ಮಹೇಶ್ ಚಂದ್ರ ಅಮಾನತು ಆದ ಹಿನ್ನೆಲೆಯಲ್ಲಿ ಈ ಹುದ್ದೆ ಮತ್ತೆ ಸುದ್ದಿಯಲ್ಲಿದೆ.
ಮಹೇಶ್ ಚಂದ್ರ ಅವರು ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಅಮಾನತು ಆದದ್ದು ಗಮನಾರ್ಹವಾಗಿದೆ. ಅವರ ಮೇಲೆ ನಡೆದಿರುವ ಈ ಕ್ರಮದಿಂದಾಗಿ ಕಚೇರಿ ಮಟ್ಟದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ಈ ಹಂತದಲ್ಲಿ ಮುಂದಿನ ತನಿಖಾ ಪ್ರಕ್ರಿಯೆ ಎತ್ತಹಾಗಿರುತ್ತದೆ ಎಂಬುದನ್ನು ಗಮನಿಸುವ ಅಗತ್ಯವಿದೆ.