ಲಕ್ಷ್ಮೇಶ್ವರ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 23 ಮಂದಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಅಪರಾಧಿಗಳ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇನ್ನಷ್ಟೇ ಘೋಷಿಸಬೇಕಾಗಿದೆ. ದೋಷಿಗಳಲ್ಲಿ ರವಿ ಹತ್ತಾಳ, ಮಲ್ಲಪ್ಪ ಹತ್ತಾಳ, ಬಸವರಾಜ್ ಕೊರವನ್ನವರ್, ಮಹಾಂತೇಶ ಹೊಳಲಾಪುರ, ರಾಜು ಹೊಳಲಾಪುರ, ಬೀರಪ್ಪ ಬಳ್ಳಾರಿ ಸೇರಿದಂತೆ 23 ಜನರ ಹೆಸರುಗಳಿವೆ.

ಘಟನೆ ಹಿನ್ನೆಲೆ

2017ರಲ್ಲಿ ಅಕ್ರಮ ಮರಳು ಸಾಗಾಟದ ವಾಹನವನ್ನು ಪೊಲೀಸರು ತಡೆದು, ಅದರ ಚಾಲಕ ಶಿವಪ್ಪ ಡೋಣಿಯನ್ನು ಥಳಿಸಿದ ಆರೋಪ ಕೇಳಿಬಂದಿತ್ತು. ಗಾಯಗೊಂಡಿದ್ದ ಶಿವಪ್ಪ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ ನಂತರ, ಆತನ ಕುಟುಂಬಸ್ಥರು ಮತ್ತು ಸ್ಥಳೀಯರು ಭುಗಿಲೆದ್ದರು. ಪ್ರತಿಭಟನೆಯ ಕಾವು ಏರಿದಂತೆ, ಆಕ್ರೋಶಿತ ಜನರು ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದರು. ಈ ಗಲಭೆಯಲ್ಲಿ ಠಾಣೆಯ ಪೀಠೋಪಕರಣಗಳು, ಪೊಲೀಸ್ ಜೀಪ್, ಹತ್ತಾರು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಯಿತು.

ಈ ಘಟನೆಗೆ ಸಂಬಂಧಿಸಿದಂತೆ ಲಕ್ಷ್ಮೇಶ್ವರ Lakshmeshwar ಪೊಲೀಸ್ ಠಾಣೆಯಲ್ಲಿ ಒಟ್ಟು 112 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರಲ್ಲಿ 8 ಮಂದಿ ಮೃತರಾಗಿದ್ದು, ಒಬ್ಬರು ಬಾಲಪರಾಧಿ. ಉಳಿದ 103 ಜನರ ವಿರುದ್ಧ ತನಿಖೆ ನಡೆಯಿತು, ಮತ್ತು 23 ಮಂದಿಯನ್ನು ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

ಪ್ರಕರಣದ ತೀವ್ರತೆ

ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನ ದೊಡ್ಡಗೌಡರ ಅವರ ಪ್ರಕಾರ, ಗಲಭೆಕೋರರು ಠಾಣೆಗೆ ನುಗ್ಗಿ ಬೆಂಕಿ ಹಚ್ಚಿದ ಬಳಿಕ, ಅಲ್ಲಿದ್ದ ಮೂವರು ಪೊಲೀಸರ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ಸುರಿದು ಅವರನ್ನು ಸುಡುವ ಯತ್ನ ಮಾಡಿದ್ದರು. ಅದೃಷ್ಟವಶಾತ್, ಪೊಲೀಸರು ತಪ್ಪಿಸಿಕೊಂಡು ಪಾರಾಗಿದ್ದರು. ಅಲ್ಲದೇ, ಅಲ್ಲಿ ಭದ್ರತೆಗೆ ಇಟ್ಟಿದ್ದ ಬಂದೂಕನ್ನು ಕಸಿದುಕೊಳ್ಳಲು ಕೂಡ ನಿರ್ಧರಿಸಿದ್ದ ಎಂದು ವಿವರಿಸಿದರು.

ಈ ತೀರ್ಪಿನೊಂದಿಗೆ ದೀರ್ಘಕಾಲದ ವಾದ-ಪ್ರತಿವಾದ ಅಂತ್ಯಗೊಂಡಿದ್ದು, ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸಬಹುದೆಂಬ ನಿರೀಕ್ಷೆ ಇದೆ.

Related News

error: Content is protected !!