ಕಲಬುರಗಿ: ಸೇಡಂ ತಾಲೂಕಿನ ಕೋಡ್ಲಾ ಸಮೀಪದ ಸಿಮೆಂಟ್ ಕಾರ್ಖಾನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಿಹಾರ ಮೂಲದ ಕಾರ್ಮಿಕನ ಮೃತದೇಹವನ್ನು ಅಮಾನವೀಯ ರೀತಿಯಲ್ಲಿ ಎಳೆಯುವುದಾಗಿ ಕಂಡಿರುವ ವಿಡಿಯೋ ವೈರಲ್ ಆಗಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಕಾರ್ಖಾನೆಯ ಆರು ಕಾರ್ಮಿಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಘಟನೆ ವಿವರ:
ಚಂದನ್ಸಿಂಗ್ ಎಂಬ ಕಾರ್ಮಿಕ ರಕ್ತದೊತ್ತಡ ಹೆಚ್ಚಾದ ಪರಿಣಾಮ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದರು. ಆದರೆ ಸಹೋದ್ಯೋಗಿಗಳು ಅಗತ್ಯ ವೈದ್ಯಕೀಯ ಸಹಾಯ ಒದಗಿಸದೆ, ಮೃತದೇಹವನ್ನು ನಿರ್ಲಕ್ಷ್ಯಪೂರ್ಣವಾಗಿ ಎಳೆಯುವ ರೀತಿಯಲ್ಲಿ ಸ್ಥಳಾಂತರಿಸಿದರು. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕೆಲವೇ ಗಂಟೆಗಳಲ್ಲೇ ವೈರಲ್ ಆಗಿತು.

ವೀಡಿಯೋ  ಹರಿದಾಡಿದ ಬೆನ್ನಲ್ಲೇ, ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಘಟನೆಯ ಬಗ್ಗೆ ಕಿಡಿಕಾರಿದರು. ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಲು ಸೂಚಿಸಿದರು.

ಕಾನೂನು ಕ್ರಮ:
ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಕಾರ್ಖಾನೆಯ ಆರು ಕಾರ್ಮಿಕರಾದ ಅಜಯ್, ಹೈದರ್ ಅಲಿ, ಹರಿಂದರ್, ರಮೇಶ್ಚಂದ್ರ, ರವಿಶಂಕರ್ ಮತ್ತು ಅಖಿಲೇಶ್ ವಿರುದ್ಧ ಸೇಡಂ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆಯು ಕಾರ್ಮಿಕರ ಸುರಕ್ಷತೆ ಮತ್ತು ಮಾನವೀಯತೆ ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಗಿದ್ದು, ಘಟನೆಯನ್ನು ಖಂಡಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.

Related News

error: Content is protected !!