ಮಂಗಳೂರಿನ ಉಳ್ಳಾಳದ ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಸೋಮವಾರ ಮೂರು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟು 12 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ದರೋಡೆ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಮಧುರೈ ಸಮೀಪ ಬಂಧಿಸಿದ್ದಾರೆ.

ಬಂಧಿತರನ್ನು ಮುರುಗನ್, ಪ್ರಕಾಶ್ ಅಲಿಯಾಸ್ ಜೈಸ್ವಾ ಮತ್ತು ಮಣಿವಣ್ಣನ್ ಎಂದು ಗುರುತಿಸಲಾಗಿದೆ. ತಮಿಳುನಾಡಿನ ವಿವಿಧ ಪ್ರದೇಶಗಳಿಂದ ಈ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 2 ಗೋಣಿಚೀಲಗಳು, ತಲ್ವಾರ್, ಮತ್ತು 2 ಪಿಸ್ತೂಲ್‌ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರು ತಮಿಳುನಾಡಿನ ತಿರುನೆಲ್ವೇಲಿ ಮೂಲದವರಾಗಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್‌ ತಿಳಿಸಿದ್ದಾರೆ.

ಜನವರಿ 17 ರಂದು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಳದ ಕೆ.ಸಿ.ರೋಡ್‌ನಲ್ಲಿ ಇರುವ ಸಹಕಾರಿ ಬ್ಯಾಂಕ್‌ಗೆ ಮಧ್ಯಾಹ್ನದ ವೇಳೆ ಖದೀಮರ ಗುಂಪು ನುಗ್ಗಿ ಸುಮಾರು 12 ಕೋಟಿ ರೂ. ಮೌಲ್ಯದ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿತ್ತು.

ಘಟನೆಯ ನಂತರ ಆರೋಪಿಗಳು ಮಹಾರಾಷ್ಟ್ರದ ಕಾರು ಬಳಸಿಕೊಂಡು ತಮಿಳುನಾಡಿನ ತಿರುನೆಲ್ವೇಲಿಗೆ ಪರಾರಿಯಾಗಿದ್ದರು.

Related News

error: Content is protected !!