
ನಂಜನಗೂಡು: ದಿನ ನಿತ್ಯ ಗಂಡನ ಕಿರುಕುಳ. ತಾಳಲಾರದೆ ನ್ಯಾಯ ಕೇಳಲು ಪೋಲೀಸ್ ಠಾಣೆಗೆ ಬಂದ ಸಂತ್ರಸ್ತೆ ಮಹಿಳೆಯನ್ನೇ ನಿಂದಿಸಿದ ಪೋಲಿಸರ ವರ್ತನೆಗೆ ಬೇಸತ್ತ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ಸರಗೂರಿನಲ್ಲಿ ನಡೆದಿದೆ.
ಎದೆ ಎತ್ತರಕ್ಕೆ ಬೆಳೆದಿರುವ ಮಕ್ಕಳಿದ್ದಾರೆ ಜವಾಬ್ದಾರಿ ಇಲ್ಲದ ಗಂಡ ದಿನನಿತ್ಯ ಕಿರುಕುಳ ನೀಡಿ ನರಕ ಯಾತನೆ ಕೊಡುತ್ತಿದ್ದಾನೆ ಮುಂಬರುವ ದಿನಗಳಲ್ಲಿ ಇದೇ ರೀತಿ ಆದರೆ ಬದುಕು ಸಾಗಿಸುವುದು ಹೇಗೆ ? ಮಕ್ಕಳಿಗೆ ಭವಿಷ್ಯ ರೂಪಿಸುವುದು ಹೇಗೆ ? ಇದನ್ನೆಲ್ಲಾ ಅರ್ಥ ಮಾಡಿಕೊಂಡ ಮನೆ ಒಡತಿ ಗಂಡನಿಗೆ ಪೊಲೀಸರ ಮೂಲಕವಾದರೂ ಹೆದರಿಸಿ,ಬೆದರಿಸಿ ಬುದ್ಧಿ ಕಲಿಸುವ ಸಲುವಾಗಿ ಹಾಗು ದಿನನಿತ್ಯ ನೀಡುತ್ತಿದ್ದ ಕಿರುಕುಳವನ್ನು ತಾಳಲಾರದೆ ರಕ್ಷಕರಾಗಿರುವ ಆರಕ್ಷಕರ ಮೊರೆ ಹೋಗಿ ನ್ಯಾಯ ಕೇಳಲು ತೆರಳಿದ ಸಂದರ್ಭದಲ್ಲಿ ಪೋಲೀಸರು ನ್ಯಾಯ ಮತ್ತು ರಕ್ಷಣೆ ಕೇಳಲು ಹೋದ ಗೃಹಿಣಿಯನ್ನು ಚುಚ್ಚು ಮಾತಿನಿಂದ ನಿಂದಿಸಿದ ಹಿನ್ನೆಲೆ ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿ ವಿಷ ಸೇವಿಸಿ ಆಸ್ಪತ್ರೆ ಸೇರಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ
ನಂಜನಗೂಡು ತಾಲ್ಲೂಕಿನ ಹುರ ಗ್ರಾಮದ ಮಹದೇವ ಎಂಬುವರ ಪುತ್ರಿ ಮಹಾಲಕ್ಷ್ಮಿ ಎಂಬುವರನ್ನು ಕಳೆದ 9 ವರ್ಷಗಳ ಹಿಂದೆ ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಮಂಜು ಎಂಬಾತನಿಗೆ ಚಿನ್ನ, ಬೈಕ್, ಮೂರು ಲಕ್ಷ ನಗದು ಹಣ ನೀಡಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಅದ್ದೂರಿ ವಿವಾಹ ಮಾಡಿಕೊಡಲಾಗಿತ್ತು.
ಕೇವಲ ಒಂದು ವರ್ಷಗಳ ಕಾಲ ಮಾತ್ರ ಗಂಡ ಹೆಂಡತಿ ಅನ್ಯೋನ್ಯವಾಗಿ ಜೀವನ ನಡೆಸಿದ್ದರು ಎಂದು ಹೇಳಲಾಗಿದೆ
ಮಹಾಲಕ್ಷ್ಮಿ ಗಂಡ ಮಂಜು ಮನೆಯವರ ಮಾತು ಕೇಳಿಕೊಂಡು ದಿನನಿತ್ಯ ಕಿರುಕುಳ ನೀಡಲು ಪ್ರಾರಂಭಿಸಿದ್ದನು ಒಂದು ಗಂಡು ಮತ್ತು ಒಂದು ಹೆಣ್ಣು ಸೇರಿದಂತೆ ಇಬ್ಬರ ಮಕ್ಕಳ ಜೊತೆಗೂಡಿ ಅನ್ಯೋನ್ಯವಾಗಿ ಜೀವನ ಸಾಗಿಸುವ ಬದಲಾಗಿ ಪತಿ ಮಂಜು ದಿನನಿತ್ಯ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದನು ಎಂದು ಗೃಹಿಣಿ ಆರೋಪಿಸಿದ್ದಾಳೆ
ತಂದೆಯ ಮನೆಯಿಂದ ವರದಕ್ಷಿಣೆ ಬೇಡಿಕೆ ಇಟ್ಟು ಹಣ ತರಲು ಒತ್ತಾಯಿಸಿ ಮಕ್ಕಳ ಮುಂದೆ ಹಲ್ಲೆ ಮಾಡಿ ಮನಬಂದಂತೆ ನಿಂದಿಸುತ್ತಿದ್ದನು ಈ ಚಿತ್ರ ಹಿಂಸೆಯನ್ನು ತಾಳಲಾರದ ಮಹಾಲಕ್ಷ್ಮಿ ಸಮೀಪದಲ್ಲಿರುವ ಸರಗೂರು ಪೊಲೀಸರ ಮೊರೆ ಹೋಗಿ ಗಂಡನಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾಳೆ
ಹಾಗಾಗಿ ಮಹಾಲಕ್ಷ್ಮಿ ಮತ್ತುಆಕೆಯ ಸಹೋದರರ ಜೊತೆಗೂಡಿ ಠಾಣೆಗೆ ತೆರಳಿದ ಸಂದರ್ಭದಲ್ಲಿ ಸರಗೂರು ಪೊಲೀಸ್ ಠಾಣೆಯ ಪಿಎಸ್ಐ ನಂದೀಶ್ ಮತ್ತು ದಫೇದಾರ್ ಚಂದ್ರು ಎಂಬುವರು ಮಹಾಲಕ್ಷ್ಮಿಯನ್ನು ಗಂಡನನ್ನು ಬಿಟ್ಟು ಎಷ್ಟು ವರ್ಷಗಳಾಗಿದೆ ಗಂಡ ಹೊರತುಪಡಿಸಿದರೆ ಬೇರೆ ಯಾರೂ ಕೂಡ ನಿನ್ನ ಮನೆಯ ಹತ್ತಿರ ಬರುವುದಿಲ್ಲವೇ ಎಂದು ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂದು ಮಹಿಳೆ ಗಂಭೀರವಾಗಿ ಆರೋಪಿಸಿದ್ದಾರೆ.
ತನ್ನ ಸಹೋದರರ ಮುಂದೆ ಈ ರೀತಿ ತುಚ್ಚ ಮಾತುಗಳನ್ನಾಡಿ ನಿಂದಿಸಿದ ಪೊಲೀಸರ ನಡೆಯಿಂದ ಬೇಸತ್ತ ಗೃಹಿಣಿ ಮಹಾಲಕ್ಷ್ಮಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ರಕ್ಷಕರ ಬಳಿ ನ್ಯಾಯ ಕೇಳಲು ತೆರಳಿದ ಗೃಹಿಣಿಯ ಜೊತೆ ಅನುಚಿತವಾಗಿ ನಡೆದುಕೊಂಡ ಸರಗೂರು ಪೊಲೀಸರ ವರ್ತನೆಗೆ ಗೃಹಿಣಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಖಾಕಿ ತೊಟ್ಟು ರಕ್ಷಣೆಗೆ ನಿಂತಿರುವ ಆರಕ್ಷಕರು ಠಾಣೆಗೆ ಬರುವ ಸಾರ್ವಜನಿಕರ ಜೊತೆ ಜನಸ್ನೇಹಿ ಪೊಲೀಸರಾಗಿ ಸಭ್ಯವಾಗಿ ವರ್ತಿಸದೆ ಅದರಲ್ಲೂ ಮಹಿಳೆಯರ ಜೊತೆ ಈ ರೀತಿ ಅಸಭ್ಯವಾಗಿ ವರ್ತಿಸುವುದು ಎಷ್ಟು ಸರಿ. ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ..?
ಈ ಸಂಬಂಧ ಗೃಹ ಸಚಿವರು ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಘಟನೆಯನ್ನು ಕೂಲಂಕುಶವಾಗಿ ಪರಿಶೀಲಿಸಿ ಗೃಹಿಣಿಯ ಬಗ್ಗೆ ಅನುಚಿತವಾಗಿ ವರ್ತನೆ ಮಾಡಿರುವ ತಪ್ಪಿತಸ್ಥ ಸರಗೂರು ಪೊಲೀಸರ ವಿರುದ್ಧ ಕ್ರಮ ಕೈಗೊಂಡು ಗೃಹಿಣಿಯ ಕುಟುಂಬಕ್ಕೆ ನ್ಯಾಯ ಕಲ್ಪಿಸಿಕೊಡುವರೇ ಕಾದುನೋಡಬೇಕಿದೆ. ವರದಿ: ಮೋಹನ್