ನಗರ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣದಲ್ಲಿ ಕೇರಳದ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ಮತ್ತು ರಿಯಾಝ್ ಎಂ.ವಿ. (45) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ವಾಟ್ಸಾಪ್ ಮೂಲಕ ಸಂದೇಶ ಕಳುಹಿಸಿ, ಹಂತ ಹಂತವಾಗಿ 77,96,322.08 ರೂ. ವಂಚನೆ ಮಾಡಲಾಗಿದೆ. ಹಣ ತೊಡಗಿಸಿದ ವ್ಯಕ್ತಿಗೆ ಲಾಭಾಂಶ ನೀಡದೆ ಮೋಸಮಾಡಿದ ಆರೋಪಿಗಳು, ಈ ಬಗ್ಗೆ ಸಂತ್ರಸ್ತರಿಂದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು, ವಂಚನೆಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದರು. ಪರಿಶೀಲನೆಯ ವೇಳೆ ಪಶ್ಚಿಮ ಬಂಗಾಳ ಮೂಲದ ಖಾತೆಗೆ 26,27,114.4 ರೂ. ವರ್ಗಾವಣೆಯಾದುದು ಮತ್ತು ಅದರಿಂದ ಉಮ್ಮರ್ ವಲಿಯ ಪರಂಬತ್ ಖಾತೆಗೆ 6 ಲಕ್ಷ ರೂ. ಪಾವತಿಯಾದುದು ಪತ್ತೆಯಾಯಿತು.
ಪೊಲೀಸರು ತನಿಖೆ ಮುಂದುವರಿಸಿಕೊಂಡು, ರಿಯಾಝ್ ಎಂ.ವಿ. ಹಣವನ್ನು ವರ್ಗಾವಣೆ ಮಾಡಿರುವುದಾಗಿ ದೃಢಪಡಿಸಿದರು. ತಕ್ಷಣವೇ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಸಿಪಿ ರವೀಶ್ ನಾಯಕ, ಸೆನ್ ಠಾಣಾ ನಿರೀಕ್ಷಕ ಸತೀಶ್ ಎಂ.ಪಿ., ಮತ್ತು ಎಸ್ಸೆ ಗುರಪ್ಪಕಾಂತಿ ನೇತೃತ್ವದ ತಂಡ ಭಾಗವಹಿಸಿದೆ.

Related News

error: Content is protected !!