ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರ ಮಾಜಿ ಪತಿ ಸಂಜಯ್ ಸಿಂಗ್ (42) ನಿಧನರಾಗಿರುವ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಸುಮಾರು 7–8 ತಿಂಗಳ ಹಿಂದೆಯೇ ರಾಜಸ್ಥಾನದಲ್ಲಿ ಸಂಜಯ್ ಸಿಂಗ್ ಮೃತಪಟ್ಟಿದ್ದಾರೆ ಎನ್ನಲಾಗಿದ್ದು, ಅವರ ಸಾವಿನ ಸುದ್ದಿ ಇದೀಗ ಚರ್ಚೆಗೆ ಬಂದಿದೆ.

ಪವಿತ್ರಾ ಗೌಡ ಅವರಿಂದ ವಿಚ್ಛೇದನ ಪಡೆದ ಬಳಿಕ ಸಂಜಯ್ ಸಿಂಗ್ ಮಾನಸಿಕವಾಗಿ ಕುಗ್ಗಿದ್ದರು ಎನ್ನಲಾಗಿದೆ. ಬಳಿಕ ಮದ್ಯ ವ್ಯಸನಕ್ಕೂ ಒಳಗಾಗಿದ್ದ ಅವರು, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯುತ್ತಿದ್ದರೂ ಆರೋಗ್ಯ ಸ್ಥಿತಿ ಸುಧಾರಿಸದೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನಲ್ಲಿ ಶುರುವಾಗಿದ್ದ ಪ್ರೀತಿ

ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಉದ್ಯೋಗಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಅವರು, ಸ್ವಂತ ಕಂಪ್ಯೂಟರ್ ಇನ್‌ಸ್ಟಿಟ್ಯೂಟ್ ಕೂಡ ನಡೆಸುತ್ತಿದ್ದರು. ಇದೇ ಸಂದರ್ಭದಲ್ಲಿ ಪವಿತ್ರಾ ಗೌಡ ಅವರ ಪರಿಚಯವಾಗಿತ್ತು.

ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿ, 2007ರಲ್ಲಿ ಇಬ್ಬರೂ ಪ್ರೇಮ ವಿವಾಹವಾಗಿದ್ದರು. ಆಗ ಪವಿತ್ರಾ ಗೌಡ ಅವರಿಗೆ 18 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ದಂಪತಿ ಜೀವನ ನಡೆಸುತ್ತಿದ್ದರು. 2011ರಲ್ಲಿ ಅವರಿಗೆ ಹೆಣ್ಣು ಮಗು ಜನಿಸಿದ್ದು, ಮಗಳಿಗೆ ಖುಷಿ ಗೌಡ ಎಂದು ಹೆಸರು ಇಡಲಾಗಿತ್ತು.

ಚಿತ್ರರಂಗದ ಆಸಕ್ತಿಯಿಂದ ದಾಂಪತ್ಯದಲ್ಲಿ ಬಿರುಕು?

ವಿವಾಹದ ಬಳಿಕ ಪವಿತ್ರಾ ಗೌಡ ಅವರಿಗೆ ಸಿನಿಮಾ ಹಾಗೂ ಮಾಡೆಲಿಂಗ್ ಕ್ಷೇತ್ರದತ್ತ ಆಸಕ್ತಿ ಹೆಚ್ಚಾಯಿತು. ಚಿತ್ರರಂಗ ಪ್ರವೇಶಿಸುವ ವಿಚಾರವಾಗಿ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದವು ಎಂದು ಸಂಜಯ್ ಸಿಂಗ್ ಅವರು ಹಿಂದೆ ನೀಡಿದ್ದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ಪವಿತ್ರಾ ಗೌಡ ಚಿತ್ರರಂಗದತ್ತ ಹೆಜ್ಜೆ ಇಟ್ಟ ನಂತರ ಇಬ್ಬರ ನಡುವಿನ ಅಂತರ ಮತ್ತಷ್ಟು ಹೆಚ್ಚಾಯಿತು ಎನ್ನಲಾಗಿದೆ. ಕೊನೆಗೆ 2013ರ ವೇಳೆಗೆ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದರು.

ಪತ್ನಿಯ ಬಂಧನದ ವೇಳೆ ಬೆಂಗಳೂರಿಗೆ ಬಂದಿದ್ದ ಸಂಜಯ್

ವಿಚ್ಛೇದನದ ಬಳಿಕ ಸಂಜಯ್ ಸಿಂಗ್ ಬೆಂಗಳೂರನ್ನು ತೊರೆದು ರಾಜಸ್ಥಾನದಲ್ಲಿ ನೆಲೆಸಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಬಂಧನಕ್ಕೊಳಗಾದ ಸಂದರ್ಭದಲ್ಲಿ ಅವರು ರಾಜಸ್ಥಾನದಿಂದ ಬೆಂಗಳೂರಿಗೆ ಆಗಮಿಸಿದ್ದರು. ಮಾಧ್ಯಮಗಳ ಮುಂದೆ ಮಾತನಾಡಿ, ಪವಿತ್ರಾ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದರು.

ಇದೀಗ ಸಂಜಯ್ ಸಿಂಗ್ ನಿಧನದ ಸುದ್ದಿ ತಡವಾಗಿ ಬಹಿರಂಗವಾಗಿದ್ದು, ಪವಿತ್ರಾ ಗೌಡ ಅವರ ಜೀವನದ ಒಂದು ಪ್ರಮುಖ ಅಧ್ಯಾಯ ಮತ್ತೆ ಮುನ್ನೆಲೆಗೆ ಬಂದಿದೆ. ಪ್ರೀತಿ, ವಿವಾಹ, ಮಗಳು, ವಿಚ್ಛೇದನ ಹಾಗೂ ವರ್ಷಗಳ ಬಳಿಕ ಮಾಜಿ ಪತ್ನಿಯ ಪರ ನಿಂತಿದ್ದ ಸಂಜಯ್ ಸಿಂಗ್ ಅವರ ಬದುಕಿಗೆ ಇದೀಗ ಶಾಶ್ವತ ತೆರೆ ಬಿದ್ದಿದೆ.

Related News

error: Content is protected !!