ಶಿರಸಿ: ತಮ್ಮನನ್ನು ರಕ್ಷಿಸಲು ಹೋದ ಅಣ್ಣನೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಉಂಚಳ್ಳಿ ಸಮೀಪದ ಮಾಸ್ತಿಜಡ್ಡಿಯ ಚಿಕ್ಕ ಡ್ಯಾಂನಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಮೂಲತಃ ಹೊನ್ನಾವರ ತಾಲೂಕಿನ ಮಾಸ್ತಿಜಡ್ಡಿಯ ಹರ್ಷಾ ನಾಯ್ಕ (18) ಹಾಗೂ ಅವರ ಸಹೋದರ ಮದನ ನಾಯ್ಕ (16) ಎಂದು ಗುರುತಿಸಲಾಗಿದೆ.

ಹರ್ಷಾ ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಮದನ ಶಿರಸಿಯ ಮಾರಿಕಾಂಬಾ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು.

ಭಾನುವಾರ ಮಧ್ಯಾಹ್ನ ಇಬ್ಬರೂ ಮನೆಯ ಸಮೀಪದ ತೋಟದ ಕೆಳಭಾಗದಲ್ಲಿರುವ ಚಿಕ್ಕ ಡ್ಯಾಂಗೆ ತೆರಳಿದ್ದರು. ಈ ವೇಳೆ ನೀರಿಗೆ ಇಳಿದ ಮದನ ಮುಳುಗತೊಡಗಿದ್ದಾನೆ. ಇದನ್ನು ಕಂಡ ಹರ್ಷಾ ತಮ್ಮನನ್ನು ರಕ್ಷಿಸಲು ತಕ್ಷಣವೇ ನೀರಿಗೆ ಧುಮುಕಿದ್ದಾನೆ. ಆದರೆ ನೀರಿನ ಆಳ ಮತ್ತು ಸೆಳೆತಕ್ಕೆ ಸಿಲುಕಿ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಶಿರಸಿ ಗ್ರಾಮೀಣ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಹಾಗೂ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್ ತಂಡ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿತು. ಸತತ ಕಾರ್ಯಾಚರಣೆಯ ಬಳಿಕ ಇಬ್ಬರ ಮೃತದೇಹಗಳನ್ನು ಮೇಲಕ್ಕೆತ್ತುವಲ್ಲಿ ರಕ್ಷಣಾ ಸಿಬ್ಬಂದಿ ಯಶಸ್ವಿಯಾಯಿತು.

ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ರೀ ಮಾರಿಕಾಂಬಾ ಲೈಫ್ ಗಾರ್ಡ್‌ನ ಗೋಪಾಲ ಗೌಡಾ, ರಾಜು ಮಡಿವಾಳ, ಪ್ರದೀಪ ಎಸಳೆ, ದೀಪಕ ಕಾನಡೆ ಹಾಗೂ ದರ್ಶನ ಕಬ್ಬೆ ಸೇರಿದಂತೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಪಾಲ್ಗೊಂಡಿದ್ದರು.

ಈ ಕುರಿತು ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ. ತಮ್ಮನನ್ನು ರಕ್ಷಿಸಲು ಜೀವದ ಹಂಗು ತೊರೆದು ಕಾಪಾಡಲು ಹೋದ ಅಣ್ಣನೂ ಪ್ರಾಣ ಕಳೆದುಕೊಂಡಿರುವ ಈ ಘಟನೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಕಂಬನಿ ಮಿಡಿಯುವಂತೆ ಮಾಡಿದೆ.

Related News

error: Content is protected !!