
ಲಕ್ನೋ: ಉತ್ತರ ಪ್ರದೇಶದ 2014ರ ಪಿಸಿಎಸ್ ಅಧಿಕಾರಿ ಹಾಗೂ ಆಗ್ರಾದ ಮಾಜಿ ಎಆರ್ಟಿಒ ಅಧಿಕಾರಿ ಲಲಿತ್ ಕುಮಾರ್ ಅವರ ಲಕ್ನೋ ನಿವಾಸದ ಮೇಲೆ ಉತ್ತರ ಪ್ರದೇಶ ಜಾಗೃತ (ವಿಜಿಲೆನ್ಸ್) ಇಲಾಖೆ ನಡೆಸಿದ ದಾಳಿಯಲ್ಲಿ ಅಪಾರ ಪ್ರಮಾಣದ ಚಿನ್ನ, ಬೆಳ್ಳಿ, ನಗದು ಮತ್ತು ಆಸ್ತಿ ದಾಖಲೆಗಳು ಪತ್ತೆಯಾಗಿವೆ.
ಜಾಗೃತ ಇಲಾಖೆಯ ಮಾಹಿತಿಯ ಪ್ರಕಾರ, ದಾಳಿಯ ವೇಳೆ ಸುಮಾರು 15 ಕೆಜಿ ಚಿನ್ನ, 9 ಕೆಜಿ ಬೆಳ್ಳಿ, ವಜ್ರ ಸೇರಿದಂತೆ ಇತರ ಅಮೂಲ್ಯ ರತ್ನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ ಸುಮಾರು ₹20 ಕೋಟಿ ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಮನೆಯ ವಿವಿಧ ಭಾಗಗಳಲ್ಲಿ ಅಡಗಿಸಿಟ್ಟಿದ್ದ ₹1.62 ಕೋಟಿ ನಗದನ್ನೂ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಇದರ ಜೊತೆಗೆ ಲಕ್ನೋ, ನೋಯ್ಡಾ ಹಾಗೂ ರಾಯ್ ಬರೇಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಇರುವ 15ಕ್ಕೂ ಹೆಚ್ಚು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳೂ ಪತ್ತೆಯಾಗಿದ್ದು, ಅವುಗಳ ಮೌಲ್ಯ ಹಲವು ಕೋಟಿ ರೂಪಾಯಿಗಳಷ್ಟಿದೆ ಎಂದು ವರದಿಯಾಗಿದೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಮೆಚ್ಚಿ ಉತ್ತರ ಪ್ರದೇಶದ ಡಿಜಿಪಿ ಜಾಗೃತ ಇಲಾಖೆಯ ತಂಡಕ್ಕೆ ₹1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ.






