ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಪಾರ್ಟಿ ವಿಚಾರವಾಗಿ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಬೆಳಕಿಗೆ ಬಂದಿದೆ. ಹನುಮಂತಪ್ಪ ಇಟಗಿ ಹತ್ಯೆಯಾದ ವ್ಯಕ್ತಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತ ವಿಶ್ವನಾಥ್ ವಿರುದ್ಧ ಆರೋಪ ಕೇಳಿಬಂದಿದೆ.

ಹನುಮಂತಪ್ಪ ಊರಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳುತ್ತಿದ್ದನು. ವಿಶ್ವನಾಥ್ ಹಾಗೂ ಹನುಮಂತಪ್ಪ ಇಬ್ಬರೂ ಒಂದೇ ಗ್ರಾಮದವರಾಗಿದ್ದು, ಆಪ್ತ ಸ್ನೇಹಿತರಾಗಿದ್ದರು.

ಐದು ತಿಂಗಳ ಹಿಂದೆ ವಿಶ್ವನಾಥ್‌ಗೆ ಗಂಡು ಮಗು ಹುಟ್ಟಿತ್ತು. ಇದೇ ಖುಷಿಗೆ ಪಾರ್ಟಿ ಕೊಡಿಸುವಂತೆ ಹನುಮಂತಪ್ಪ ಹಲವು ಬಾರಿ ಕೇಳುತ್ತಿದ್ದನು ಎನ್ನಲಾಗಿದೆ. ಬಳಿಕ ವಿಶ್ವನಾಥ್ ಹೊಸ ಬೈಕ್ ಖರೀದಿಸಿದ ಸಂದರ್ಭದಲ್ಲೂ ಪಾರ್ಟಿ ವಿಚಾರ ಪ್ರಸ್ತಾಪಿಸಿ ಸ್ನೇಹಿತರ ಎದುರಲ್ಲೇ ಹನುಮಂತಪ್ಪ ಗೇಲಿ ಮಾಡುತ್ತಿದ್ದನೆಂದು ತಿಳಿದುಬಂದಿದೆ.

ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಮೋಹರಂ ಹಬ್ಬದ ಸಂಭ್ರಮ ನಡೆಯುತ್ತಿದ್ದ ವೇಳೆ ಮತ್ತೆ ಪಾರ್ಟಿ ವಿಚಾರವಾಗಿ ಮಾತುಕತೆ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಹನುಮಂತಪ್ಪನ ಕೈ ವಿಶ್ವನಾಥ್ ಕಣ್ಣಿಗೆ ತಾಗಿದ್ದರಿಂದ ಆತ ಕೋಪಗೊಂಡಿದ್ದಾನೆ ಎನ್ನಲಾಗಿದೆ.

ಕೋಪದ ಭರದಲ್ಲಿ ವಿಶ್ವನಾಥ್ ಹನುಮಂತಪ್ಪನನ್ನು ನೆಲಕ್ಕುರುಳಿಸಿ ಹಲ್ಲೆ ನಡೆಸಿದ್ದಾನೆ. ಬಳಿಕ ಅಲ್ಲೇ ಇದ್ದ ಕಲ್ಲಿನಿಂದ ತಲೆಗೆ ಹೊಡೆದ ಪರಿಣಾಮ ಹನುಮಂತಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

error: Content is protected !!