ಪಶ್ಚಿಮ ಬಂಗಾಳದಲ್ಲಿ ಶಿಕ್ಷಣ ಸಂಸ್ಥೆಗಳ ದುರುಪಯೋಗದ ಆರೋಪಗಳು ಮತ್ತೆ ಚರ್ಚೆಗೆ ಗ್ರಾಸವಾಗಿವೆ. ಇತ್ತೀಚೆಗಷ್ಟೇ ಸುರೇಂದ್ರನಾಥ ಕಾಲೇಜಿನ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಗನ್ ಹಾಗೂ ಕೋಟ್ಯಂತರ ರೂಪಾಯಿ ನಗದು ಪತ್ತೆಯಾದ ಘಟನೆ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಆ ಪ್ರಕರಣದ ಬೆನ್ನಲ್ಲೇ ಇದೀಗ ಕಾಂಚ್ರಾಪಾರಾದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಯೊಂದರಲ್ಲಿ ಮತ್ತೊಂದು ವಿವಾದಾತ್ಮಕ ಘಟನೆ ಬೆಳಕಿಗೆ ಬಂದಿದೆ.
ಅಕ್ರಮ ಹಣ ಸಂಗ್ರಹ ಹಾಗೂ ಅನೈತಿಕ ಚಟುವಟಿಕೆಗಳ ಆರೋಪದ ಹಿನ್ನೆಲೆ ಬಿಜೆಪಿ ಶಾಸಕ ಸಂದೀಪ್ ದಾಸ್ ಹಾಗೂ ಪೊಲೀಸರು ಬುಧವಾರ ರಾತ್ರಿ ಶಾಲೆಯ ಮೇಲೆ ಜಂಟಿ ದಾಳಿ ನಡೆಸಿದರು. ದಾಳಿ ವೇಳೆ ಶಾಲೆಯ ವಿವಿಧ ಕೊಠಡಿಗಳಲ್ಲಿ ಅಪಾರ ಪ್ರಮಾಣದ ನಗದು, ಕಾಂಡೋಮ್ಗಳು ಹಾಗೂ ಇತರ ವಸ್ತುಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಯ ಅಕೌಂಟ್ಸ್ ಕಚೇರಿಯನ್ನು ಪರಿಶೀಲಿಸಿದ ವೇಳೆ ಸುಮಾರು 1.77 ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. 500, 200 ಮತ್ತು 100 ರೂಪಾಯಿ ಮುಖಬೆಲೆಯ ನೋಟುಗಳ ಕಂತೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಹಣವನ್ನು ಎಣಿಸಲು ಹಲವು ಗಂಟೆಗಳ ಕಾಲ ಯಂತ್ರಗಳ ಸಹಾಯ ಪಡೆಯಬೇಕಾಯಿತು. ಈ ಸಂಬಂಧ ಮೂವರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ವೇಳೆ ಅಕೌಂಟ್ಸ್ ಕಚೇರಿಯ ಪಕ್ಕದಲ್ಲಿದ್ದ ಎಸಿ ವ್ಯವಸ್ಥೆಯ ವಿಶ್ರಾಂತಿ ಕೊಠಡಿಯಲ್ಲಿ ಬೆಡ್ ಹಾಗೂ ಅಲಮಾರಿಯಲ್ಲಿ ಕಾಂಡೋಮ್ಗಳು ಪತ್ತೆಯಾಗಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ.
ಬಿಜೆಪಿ ಶಾಸಕ ಸಂದೀಪ್ ದಾಸ್ ಆರೋಪಿಸಿರುವಂತೆ, ಕೆಲವು ರಾಜಕೀಯ ಮುಖಂಡರು ಅಕ್ರಮ ಹಣವನ್ನು ಶಾಲೆಯಲ್ಲಿ ಸಂಗ್ರಹಿಸಿಟ್ಟಿದ್ದರು. ಅಲ್ಲದೆ, ಈ ಶಾಲೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದವರ ವಿವರಗಳನ್ನು ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆದರೆ ಶಾಲೆಯ ಪ್ರಾಂಶುಪಾಲ ವಿಕಾಸ್ ಚಂದ್ರಪಾಲ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಪತ್ತೆಯಾದ ಹಣವು ವಿದ್ಯಾರ್ಥಿಗಳ ಪ್ರವೇಶಾತಿ ಮತ್ತು ಶುಲ್ಕದ ಮೊತ್ತವಾಗಿದ್ದು, ಸಾಮಾನ್ಯವಾಗಿ ಬ್ಯಾಂಕ್ಗೆ ಜಮೆ ಮಾಡಲಾಗುತ್ತದೆ. ಕೆಲವು ಆಡಳಿತಾತ್ಮಕ ಕಾರಣಗಳಿಂದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳ ಹಣವನ್ನು ಇನ್ನೂ ಬ್ಯಾಂಕ್ಗೆ ಜಮೆ ಮಾಡಲಾಗಿರಲಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಆದರೆ, ಬೆಡ್ ಹಾಗೂ ಕಾಂಡೋಮ್ ಪತ್ತೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ. ಸದ್ಯ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಪತ್ತೆಯಾದ ಹಣದ ಮೂಲ ಹಾಗೂ ಕೊಠಡಿಯ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
