ಭೀಮಾತೀರ ಪ್ರದೇಶ ಮತ್ತೆ ರಕ್ತದ ಮಡುವಾಗಿ ಮಾರ್ಪಟ್ಟಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದ ಭೀಕರ ಹತ್ಯಾಕಾಂಡ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಜಮೀನು ವಿವಾದದ ಹಿನ್ನೆಲೆ ಒಂದೇ ಕುಟುಂಬದ ಆರು ಮಂದಿಯನ್ನು ಅಮಾನುಷವಾಗಿ ಕೊಲೆ ಮಾಡಲಾಗಿದೆ.
ಸಂಜೆ ವೇಳೆಯಲ್ಲಿ ನಡೆದ ಈ ದಾಳಿಯಲ್ಲಿ ಹಂತಕರು ಮೊದಲು ಗುಂಡಿನ ದಾಳಿ ನಡೆಸಿ, ಬಳಿಕ ಲಾಂಗು ಮತ್ತು ಮಚ್ಚುಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ತದೋಕುಳಿ ಹರಿದಿದ್ದು, ಮೃತದೇಹಗಳ ಸ್ಥಿತಿ ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಕೆಲವರ ದೇಹಗಳು ಛಿದ್ರಗೊಂಡಿದ್ದು, ಇನ್ನೂ ಕೆಲವರ ಕೈಕಾಲುಗಳು ಕತ್ತರಿಸಲ್ಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ನಿರಾಳೆ ಮತ್ತು ಗೊಳಗಿ ಕುಟುಂಬಗಳ ನಡುವೆ ಸುಮಾರು 25 ಎಕರೆ ಜಮೀನಿನ ವಿಚಾರವಾಗಿ ಹಲವು ವರ್ಷಗಳಿಂದ ತೀವ್ರ ವೈಷಮ್ಯ ನಡೆಯುತ್ತಿತ್ತು. ವಿವಾದಿತ ಜಮೀನಿನಲ್ಲಿ ಕೃಷಿ ಕಾರ್ಯ ಆರಂಭಿಸಲು ನಿರಾಳೆ ಕುಟುಂಬದವರು ತೆರಳಿದ್ದ ವೇಳೆ ದಾಳಿ ನಡೆದಿದೆ ಎನ್ನಲಾಗಿದೆ.
ಪಟ್ಟಣ ಪಂಚಾಯ್ತಿ ಸದಸ್ಯ ಚೇತನ ನಿರಾಳೆ ಕುಟುಂಬದವರ ಮೇಲೆ ಅಪ್ಪುಗೌಡ ಮತ್ತು ಆತನ ಸಹಚರರು ಪೂರ್ವಯೋಜಿತವಾಗಿ ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಬಂದೂಕು, ಲಾಂಗು ಹಾಗೂ ಮಚ್ಚುಗಳನ್ನು ಹಿಡಿದು ಬಂದಿದ್ದ ತಂಡ ಹೊಲದಲ್ಲಿದ್ದವರನ್ನು ಅಟ್ಟಾಡಿಸಿಕೊಂಡು ಹತ್ಯೆ ಮಾಡಿದೆ. ಈ ವೇಳೆ ಕೂಲಿ ಕೆಲಸಕ್ಕೆ ಬಂದಿದ್ದ ಶಬ್ಬೀರ್ ಎಂಬಾತ ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.
ಮೊದಲು ಗುಂಡಿನ ದಾಳಿ ನಡೆಸಿ, ಬಳಿಕ ನೆಲಕ್ಕುರುಳಿದವರ ಮೇಲೆ ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಒಂದೇ ಜಾಗದಲ್ಲಿ ಆರು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಆರೋಪಿ ಅಪ್ಪುಗೌಡ ಭೀಮಾತೀರ ಪ್ರದೇಶದ ಹಳೆಯ ವೈಷಮ್ಯಗಳ ಹಿನ್ನೆಲೆಯಲ್ಲೇ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
