ಬೆಂಗಳೂರು: ಪೌಲ್ಟ್ರಿ ಫೀಡ್ಸ್‌ (ಕೋಳಿಗಳಿಗೆ ಹಾಕುವ ಆಹಾರ) ಸಾಗಣೆ ನೆಪದಲ್ಲಿ ‘ಪುಷ್ಪ’ ಸಿನಿಮಾದ ಮಾದರಿಯಲ್ಲಿ ಅಂತರ್‌ರಾಜ್ಯ ಗಾಂಜಾ ಸಾಗಣೆ ಮಾಡುತ್ತಿದ್ದ ಜಾಲವನ್ನು ಬೆಂಗಳೂರು ಹೊರವಲಯದ ಜಿಗಣಿ ಪೊಲೀಸರು ಭೇದಿಸಿದ್ದು, ₹1.25 ಕೋಟಿ ಮೌಲ್ಯದ 250 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಒಡಿಶಾದಿಂದ ಲಾರಿಯಲ್ಲಿ ಪೌಲ್ಟ್ರಿ ಫೀಡ್ಸ್ ಲೋಡ್ ಮಧ್ಯೆ ಸಣ್ಣ ಸಣ್ಣ ಪ್ಯಾಕೆಟ್‌ಗಳಲ್ಲಿ ಗಾಂಜಾ ಅಡಗಿಸಿ ಕರ್ನಾಟಕಕ್ಕೆ ಸಾಗಣೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ

ಖಚಿತ ಮಾಹಿತಿ ಆಧರಿಸಿ ಬೇಗೂರು ರಸ್ತೆಯ ಕೊಪ್ಪ ಬಳಿ ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ದಾಳಿ ನಡೆಸಿತು. ಈ ವೇಳೆ ಲಾರಿಯನ್ನು ತಪಾಸಣೆ ನಡೆಸಿದಾಗ ಕೋಳಿ ಆಹಾರದ ಚೀಲಗಳ ನಡುವೆ ಅಡಗಿಸಲಾಗಿದ್ದ 250 ಕೆಜಿ ಗಾಂಜಾ ಪತ್ತೆಯಾಗಿದೆ.

ಪ್ರಕರಣ ಸಂಬಂಧ ಬಿಹಾರ ಮೂಲದ ರಾಮಾಯಣ್ ಯಾದವ್ ಮತ್ತು ಸಬೀರ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಪ್ರಮುಖ ಆರೋಪಿಗಳಿಗಾಗಿ ಶೋಧ

ಈ ಗಾಂಜಾ ಜಾಲದ ಪ್ರಮುಖ ಆರೋಪಿಗಳಾದ ಬಿನೋದ್ ಸಿಂಗ್ ಹಾಗೂ ಬಾಬು ಎಂಬವರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್‌ಪಿ ಚಂದ್ರಕಾಂತ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸರನ್ನು ಶ್ಲಾಘಿಸಿ ನಗದು ಬಹುಮಾನ ಘೋಷಿಸಿದ್ದಾರೆ.

ಈ ಕುರಿತು ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಂಜಾ ಸಾಗಣೆ ಜಾಲದ ಹಿಂದಿರುವ ಪ್ರಮುಖ ಕಿಂಗ್‌ಪಿನ್‌ಗಳನ್ನು ಪತ್ತೆಹಚ್ಚಲು ತನಿಖೆ ಚುರುಕುಗೊಳಿಸಲಾಗಿದೆ.

Related News

error: Content is protected !!