ಚಂಡೀಗಢ: ಸಂಟೆಕ್ ಸಿಟಿ ಯೋಜನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಮತ್ತು ಭ್ರಷ್ಟಾಚಾರ ಆರೋಪಗಳ ತನಿಖೆ ವೇಳೆ ಜಾರಿ ನಿರ್ದೇಶನಾಲಯ (ED) ನಡೆಸಿದ ದಾಳಿಯಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಬಂಧನದ ಭೀತಿಯಿಂದ ಉದ್ಯಮಿಯೊಬ್ಬ 9ನೇ ಮಹಡಿಯಿಂದ ನಗದು ತುಂಬಿದ್ದ ಎರಡು ಬ್ಯಾಗ್‌ಗಳನ್ನು ಕೆಳಗೆ ಎಸೆದಿರುವ ಘಟನೆ ಚರ್ಚೆಗೆ ಗ್ರಾಸವಾಗಿದೆ.

ಮೊಹಾಲಿ ಮತ್ತು ಚಂಡೀಗಢದ ಒಟ್ಟು 12 ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಲ್ಡರ್‌ಗಳು ಮತ್ತು ಅಭಿವೃದ್ಧಿ ಅಧಿಕಾರಿಗಳ ನಡುವಿನ ಅಕ್ರಮ ಒಪ್ಪಂದಗಳ ಮೂಲಕ ಕೋಟ್ಯಂತರ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

9ನೇ ಮಹಡಿಯಿಂದ ಹಣದ ಬ್ಯಾಗ್ ಎಸೆತ

ಇಡಿ ಅಧಿಕಾರಿಗಳು ಆರೋಪಿ ನಿತಿನ್ ಗೋಹಲ್ ನಿವಾಸದತ್ತ ಬರುತ್ತಿದ್ದಂತೆ, ಕಟ್ಟಡದ 9ನೇ ಮಹಡಿಯಿಂದ ಎರಡು ಬ್ಯಾಗ್‌ಗಳನ್ನು ಕೆಳಗೆ ಎಸೆಯಲಾಗಿದೆ ಎಂದು ತಿಳಿದುಬಂದಿದೆ. ಬ್ಯಾಗ್‌ಗಳಲ್ಲಿ ನಗದು ತುಂಬಿದ್ದು, ಒಂದು ಬ್ಯಾಗ್ ನೆಲಕ್ಕೆ ಬಿದ್ದ ರಭಸಕ್ಕೆ ಕಿತ್ತು ಹೋಗಿ ₹500 ಮುಖಬೆಲೆಯ ನೋಟುಗಳ ಕಟ್ಟುಗಳು ರಸ್ತೆಯ ಮೇಲೆ ಚೆಲ್ಲಾಪಿಲ್ಲಿಯಾಗಿವೆ. ಈ ದೃಶ್ಯಗಳ ವೀಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇನ್ನೊಂದು ಬ್ಯಾಗ್‌ನ್ನು ಆರೋಪಿಯ ಚಾಲಕ ತೆಗೆದುಕೊಂಡು ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ.

ಯಾರ ಮೇಲೆ ದಾಳಿ?

ಸಂಟೆಕ್ ಸಿಟಿ ಯೋಜನೆಯ ಪ್ರವರ್ತಕ ಅಜಯ್ ಸೆಹಗಲ್, ಎಬಿಎಸ್ ಟೌನ್‌ಶಿಪ್, ಆಲ್ಟಸ್ ಬಿಲ್ಡರ್ಸ್ ಹಾಗೂ ಧೀರ್ ಕನ್ಸ್ಟ್ರಕ್ಷನ್ಸ್ ಸೇರಿದಂತೆ ಹಲವು ನಿರ್ಮಾಣ ಸಂಸ್ಥೆಗಳ ಮೇಲೆ ಇಡಿ ದಾಳಿ ನಡೆಸಿದೆ. ಅಭಿವೃದ್ಧಿ ಪ್ರಾಧಿಕಾರಗಳಿಂದ ಅಕ್ರಮವಾಗಿ ಪರವಾನಗಿ ಪಡೆಯಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮುಖ್ಯಮಂತ್ರಿ OSD ಆಪ್ತನ ಹೆಸರು!

ಈ ಪ್ರಕರಣದಲ್ಲಿ ಹೆಸರು ಕೇಳಿಬಂದಿರುವ ನಿತಿನ್ ಗೋಹಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ OSD ರಾಜ್‌ಬೀರ್ ಘುಮಾನ್ ಅವರ ಆಪ್ತ ಸಹಾಯಕ ಎನ್ನಲಾಗಿದೆ.

ಗ್ರೇಟರ್ ಮೊಹಾಲಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ (GMADA) ಪಾವತಿಸಬೇಕಾದ ಶುಲ್ಕ ತಪ್ಪಿಸಲು ಬಿಲ್ಡರ್‌ಗಳಿಗೆ ನಿತಿನ್ ನೆರವಾಗುತ್ತಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಜೊತೆಗೆ ರಾಜಕೀಯ ಮಟ್ಟದಲ್ಲೂ ಸಹಕಾರ ಒದಗಿಸುತ್ತಿದ್ದಾನೆ ಎಂದು ತನಿಖಾ ಸಂಸ್ಥೆ ಶಂಕಿಸಿದೆ.

ನಿತಿನ್ ಗೋಹಲ್ ಮುಖ್ಯಮಂತ್ರಿ ಕಚೇರಿಯ “ಸಂಪರ್ಕ ಬಿಂದು” ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂಬ ಅನುಮಾನ ಇಡಿಗೆ ವ್ಯಕ್ತವಾಗಿದ್ದು, ಸದ್ಯ ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

error: Content is protected !!