ಚಿಕ್ಕಬಳ್ಳಾಪುರ: ಮದುವೆಯ ಮೊದಲ ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸಿಕೊಳ್ಳಬೇಕಿದ್ದ ನವವಿವಾಹಿತೆಯೊಬ್ಬಳು, ಗಂಡನ ಅನುಮಾನ ಹಾಗೂ ನಿರಂತರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆಯಲ್ಲಿ ನಡೆದಿದೆ.

ಗೌರಿಬಿದನೂರು ಮೂಲದ ಪ್ರೇಮಾ ಹಾಗೂ ಶಿಡ್ಲಘಟ್ಟದ ಶಿವಕುಮಾರ್ ಸಂಬಂಧಿಕರಾಗಿದ್ದು, ಪ್ರೇಮಾ ಅವರನ್ನು ಶಿವಕುಮಾರ್ ಪ್ರೀತಿಸಿ ಮದುವೆಯಾಗಿದ್ದನು. ಮದುವೆಯಾದ ಮೊದಲ ಮೂರು ತಿಂಗಳು ದಾಂಪತ್ಯ ಜೀವನ ಸುಖಕರವಾಗಿದ್ದರೂ, ಬಳಿಕ ಅಸಹಜ ತಿರುವು ಪಡೆದುಕೊಂಡಿದೆ.

ಈ ದಂಪತಿಯ ಜೀವನದಲ್ಲಿ ಬಿರುಕು ಮೂಡಲು ಕಾರಣವಾದದ್ದು ಪ್ರೇಮಾ ಎದೆಯ ಮೇಲೆ ಇದ್ದ ಹಚ್ಚೆ (Tattoo). ಯುವಕನೊಬ್ಬನ ಹೆಸರಿನ ಹಚ್ಚೆಯನ್ನು ಕಂಡ ಶಿವಕುಮಾರ್, ಅದನ್ನು ಕೇವಲ ಸ್ನೇಹಿತನ ಹೆಸರು ಎಂದು ಪತ್ನಿ ಸ್ಪಷ್ಟನೆ ನೀಡಿದರೂ ನಂಬದೆ, ಅನುಮಾನ ಪಡಲು ಆರಂಭಿಸಿದ್ದ. ಇದೇ ವಿಚಾರ ದಂಪತಿಗಳ ನಡುವೆ ನಿರಂತರ ಜಗಳಕ್ಕೆ ಕಾರಣವಾಯಿತು.

ಕಾಲಕ್ರಮೇಣ ಶಿವಕುಮಾರ್‌ನ ಅನುಮಾನ ತೀವ್ರಗೊಂಡು, ಪತ್ನಿಯ ಮೇಲೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಶುರು ಮಾಡಿದ್ದಾನೆ ಎನ್ನಲಾಗಿದೆ. ಇದಲ್ಲದೆ, ವರದಕ್ಷಿಣೆ ತರಬೇಕೆಂದು ಒತ್ತಾಯಿಸಿ, ಪ್ರೇಮಾಳನ್ನು ಹಲ್ಲೆ ಮಾಡುತ್ತಿದ್ದ ಎಂಬ ಆರೋಪವೂ ಕೇಳಿಬಂದಿದೆ.

ಮೂರು ತಿಂಗಳ ಹಿಂದೆ ಪ್ರೇಮಾಗೆ ಗರ್ಭಪಾತವಾಗಿದ್ದ ಸಂದರ್ಭದಲ್ಲಿಯೂ ಗಂಡನ ಮನೆಯವರು ಸರಿಯಾದ ಆರೈಕೆ ನೀಡಿಲ್ಲ ಎಂದು ಮೃತಳ ತಾಯಿ ಆರೋಪಿಸಿದ್ದಾರೆ. ಕುಟುಂಬದ ಒಳಜಗಳ, ಕಿರುಕುಳ ಮತ್ತು ಮಾನಸಿಕ ಒತ್ತಡಗಳಿಂದ ನಲುಗಿದ ಪ್ರೇಮಾ, ಕೊನೆಗೆ ಗಂಡನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ.

ಸ್ಥಳಕ್ಕೆ ಭೇಟಿ ನೀಡಿದ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಹಾಗೂ ಆತ್ಮಹತ್ಯೆಗೆ ಪ್ರೇರಣೆ ಆರೋಪದಡಿ ಪತಿ ಶಿವಕುಮಾರ್‌ರನ್ನು ಬಂಧಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಘಟನೆ ದಾಂಪತ್ಯ ಜೀವನದಲ್ಲಿ ಅನುಮಾನ ಮತ್ತು ಕಿರುಕುಳ ಎಷ್ಟು ಭೀಕರ ಪರಿಣಾಮಗಳನ್ನು ಉಂಟುಮಾಡಬಹುದು ಎಂಬುದಕ್ಕೆ ಮತ್ತೊಂದು ದಾರುಣ ಉದಾಹರಣೆಯಾಗಿದೆ.

Related News

error: Content is protected !!