ಪೂಜೆ ಮತ್ತು ದೀಕ್ಷೆಯ ಹೆಸರಿನಲ್ಲಿ ಮಹಿಳೆಯೊಬ್ಬರ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಪ್ರಕರಣ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಯು ವಾಮಾಚಾರ ಮಾಡುವ ಬೆದರಿಕೆ ನೀಡಿ, ಮಹಿಳೆಯ ಗಂಡ ಮತ್ತು ಮಗನ ಜೀವಕ್ಕೆ ಅಪಾಯ ಉಂಟುಮಾಡುವುದಾಗಿ ಹೆದರಿಸಿ ಈ ಕೃತ್ಯಗಳನ್ನು ನಡೆಸಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ.

ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ತರಬೇತಿ ಕೇಂದ್ರ ನಡೆಸುತ್ತಿರುವ ಮಹಿಳೆಗೆ, ತನ್ನ ಸಹೋದರಿಯ ಪ್ರವೇಶ ವಿಚಾರದಲ್ಲಿ ಮೋಹನ್ ಕುಮಾರ್ ಎಂಬಾತ ಪರಿಚಯವಾಗಿದ್ದನು. ನಂತರ ಮಹಿಳೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಪೂಜೆ ಮಾಡಬೇಕೆಂದು ನಂಬಿಸಿ, ಅವಳನ್ನು ತನ್ನ ಪ್ರಭಾವಕ್ಕೆ ಒಳಪಡಿಸಿದ್ದಾನೆ.

2025ರ ಜನವರಿ 30ರಂದು ರಾಮನಗರ ಜಿಲ್ಲೆಯ ಪಿರಮಿಡ್ ವ್ಯಾಲಿಗೆ ಕರೆದುಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದಾದ ಬಳಿಕ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪೂಜೆಗಾಗಿ ಕರೆದುಕೊಂಡು ಹೋಗಿ, ಮರಳುವ ವೇಳೆ ಕಾರಿನಲ್ಲೇ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಈ ವಿಷಯವನ್ನು ಯಾರಿಗೂ ಹೇಳದಂತೆ, ಕುಟುಂಬದ ಮೇಲೆ ಮಾಟ-ಮಂತ್ರ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಫೆಬ್ರವರಿ 10ರಂದು ದೀಕ್ಷೆ ನೀಡುವ ನೆಪದಲ್ಲಿ ಮಹಿಳೆಯ ಮನೆಗೆ ಬಂದ ಆರೋಪಿಯು, ಗಂಡ ಮತ್ತು ಮಗನನ್ನು ಹೊರಗೆ ಕಳುಹಿಸಿ, ಮತ್ತೆ ದೌರ್ಜನ್ಯ ಎಸಗಿದ್ದಾನೆ. ತನ್ನ ಮಾತು ಕೇಳದಿದ್ದರೆ ಕುಟುಂಬವನ್ನೇ ಕೊಲ್ಲುವುದಾಗಿ ಜೀವಭೀತಿಯನ್ನೂ ಹುಟ್ಟಿಸಿದ್ದಾನೆ.

ಆರೋಪಿಯ ಕಾಟ ತಾಳಲಾರದೆ, ಮಹಿಳೆ ಕೊನೆಗೂ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಸಿ.ಕೆ. ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆದರೆ ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಆರೋಪಿ ಪರಾರಿಯಾಗಿದ್ದು, ಪೊಲೀಸರು ಅವನಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

Related News

error: Content is protected !!