ಹರಿಯಾಣದ ಚರ್ಕಿ ದಾದ್ರಿ ಜಿಲ್ಲೆಯಲ್ಲಿ ನಡೆದ ಭೀಕರ ಘಟನೆಯೊಂದು ಮಾನವ ಸಂಬಂಧಗಳನ್ನೇ ಪ್ರಶ್ನಿಸುವಂತೆ ಮಾಡಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ, ವಿಮೆ ಹಣ ಮತ್ತು ಇತರ ಆರ್ಥಿಕ ಲಾಭಕ್ಕಾಗಿ ಪತ್ನಿಯೇ ತನ್ನ ಗಂಡನನ್ನು ಸಂಚು ರೂಪಿಸಿ ಕೊಲೆ ಮಾಡಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಮೊದಲಿನಿಂದ ಈ ಘಟನೆ ರಸ್ತೆ ಅಪಘಾತವೆಂದು ಕಾಣಿಸಿಕೊಂಡಿತ್ತು. ಏಪ್ರಿಲ್ 19ರಂದು ತಿವಾಲಾ ಗ್ರಾಮದ ಬಳಿ ಸ್ಕೂಟರ್ಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಪ್ರದೀಪ್ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣವನ್ನು ಸಾಮಾನ್ಯ ಅಪಘಾತವೆಂದು ದಾಖಲಿಸಲಾಗಿತ್ತು. ಆದರೆ ಸ್ಕೂಟರ್ಗೆ ಅಲ್ಪ ಹಾನಿಯಾಗಿದ್ದರೂ ಪ್ರದೀಪ್ಗೆ ಗಂಭೀರ ಗಾಯಗಳಾಗಿದ್ದರಿಂದ ಕುಟುಂಬದವರಿಗೆ ಅನುಮಾನ ಹುಟ್ಟಿತು.
ಏಪ್ರಿಲ್ 24ರಂದು ಪ್ರದೀಪ್ ಅವರ ಸಹೋದರಿ ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿತು. ಡಿಎಸ್ಪಿ ಧೀರಜ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ತಾಂತ್ರಿಕ ಮತ್ತು ವೈಜ್ಞಾನಿಕ ತನಿಖೆ ಆರಂಭಿಸಿದರು. ಮೊಬೈಲ್ ಕರೆ ವಿವರಗಳು, ಬ್ಯಾಂಕ್ ವ್ಯವಹಾರಗಳು ಮತ್ತು ಇತರ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಈ ಅಪಘಾತದ ಹಿಂದೆ ಕೊಲೆ ಸಂಚು ಇರುವುದು ಬಹಿರಂಗವಾಯಿತು.
ತನಿಖೆಯಲ್ಲಿ ಪತ್ನಿಯೇ ಪ್ರಮುಖ ಆರೋಪಿ ಎಂದು ಹೊರಬಂದಿದೆ. 2026ರ ಫೆಬ್ರವರಿ ಮತ್ತು ಏಪ್ರಿಲ್ ತಿಂಗಳಲ್ಲಿ ಪತ್ನಿ ತನ್ನ ಗಂಡ ಪ್ರದೀಪ್ ಹೆಸರಿನಲ್ಲಿ ತಲಾ ₹60 ಲಕ್ಷ ಮೌಲ್ಯದ ಎರಡು ಜೀವ ವಿಮಾ ಪಾಲಿಸಿಗಳನ್ನು ತೆಗೆದುಕೊಂಡಿದ್ದಳು. ಎರಡರಲ್ಲೂ ತಾನೇ ನಾಮಿನಿಯಾಗಿದ್ದಳು. ಇದಲ್ಲದೆ, ಗಂಡನ ಪೂರ್ವಜರ ಆಸ್ತಿ ಮತ್ತು ಹಣದ ಮೇಲೆ ಕಣ್ಣು ಇಟ್ಟು ಸುಮಾರು ₹2 ಕೋಟಿ ಲಾಭ ಪಡೆಯಲು ಈ ಸಂಚು ರೂಪಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಪತ್ನಿ ತನ್ನ ಪ್ರೇಮಿ ಮುಖೇಶ್ ಜೊತೆ ಸೇರಿ ಕೊಲೆ ಯೋಜನೆ ರೂಪಿಸಿದ್ದಳು. ಗಂಡನ ಹಣದಿಂದ ಖರೀದಿಸಿದ ಬೈಕ್ ಅನ್ನು ಪ್ರೇಮಿಗೆ ನೀಡಿ, ಅಪಘಾತದ ನಾಟಕ ಮಾಡಲು ಬಳಸಲಾಗಿದೆ. ಪ್ರದೀಪ್ನ್ನು ರಸ್ತೆಯಲ್ಲಿ ಗುರಿಯಾಗಿಸಿ ಡಿಕ್ಕಿ ಹೊಡೆದು ಕೊಲೆ ಮಾಡಿ, ಅದನ್ನು ಅಪಘಾತವೆಂದು ತೋರಿಸಲು ಯತ್ನಿಸಿದ್ದರು.
ಈ ಪ್ರಕರಣದಲ್ಲಿ ಪತ್ನಿಯ ಜೊತೆಗೆ ಮುಖೇಶ್, ಜಸ್ಬೀರ್ ಅಲಿಯಾಸ್ ಮಾಂಟಿ, ರವಿ ಸಾಂಗ್ವಾನ್ ಮತ್ತು ಅಕ್ಷಯ್ ಎಂಬವರನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆಯಿಂದ iPhone 13 ಹಾಗೂ ಸಿಮ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದ್ದು, ಇತರ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.
ಪೊಲೀಸರ ತನಿಖೆಯ ಪ್ರಕಾರ, ಪತ್ನಿ ಅನು ಮತ್ತು ಪ್ರದೀಪ್ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳಿದ್ದವು. 2025ರಲ್ಲಿ ನ್ಯಾಯಾಲಯಕ್ಕೆ ಹೋದ ವೇಳೆ ಅನು ಮುಖೇಶ್ನ್ನು ಪರಿಚಯಿಸಿಕೊಂಡು ನಂತರ ಅನೈತಿಕ ಸಂಬಂಧ ಬೆಳೆದಿತ್ತು. ಬಳಿಕ ಇಬ್ಬರೂ ಸೇರಿ ಪ್ರದೀಪ್ನ್ನು ಹತ್ಯೆ ಮಾಡುವ ಸಂಚು ರೂಪಿಸಿ, ಆಸ್ತಿ ಲಾಭಕ್ಕಾಗಿ ಈ ಕ್ರೂರ ಕೃತ್ಯಕ್ಕೆ ಕೈ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಲವಾದ ಚಾರ್ಜ್ಶೀಟ್ ಸಿದ್ಧಪಡಿಸುತ್ತಿದ್ದು, ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.
