ಮುಂಡಗೋಡ: ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಎದುರಿನ ಅಂಬಿಕಾ ಸಾವಜಿ ಹೋಟೆಲ್‌ನಲ್ಲಿ ಊಟಕ್ಕೆ ಕುಳಿತಿದ್ದಾಗ ನಡೆದಿದ್ದ ರೌಡಿ ಶೀಟರ್ ಜಮೀರ್ ಅಹ್ಮದ್ ದರ್ಗಾವಾಲೆ (38) ಅವರ ಭೀಕರ ಕೊಲೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ.

ಮೀಟರ್ ಬಡ್ಡಿ ವ್ಯವಹಾರದ ಹಳೇ ದ್ವೇಷಕ್ಕೆ ಸುಪಾರಿ ನೀಡಿ ಈ ಕೊಲೆ ಮಾಡಿಸಲಾಗಿದ್ದು, ಮುಂಡಗೋಡ ಪೊಲೀಸರು ಒಟ್ಟು ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿ ಶೀಟರ್ ಆಗಿದ್ದ ಜಮೀರ್ ಅಹ್ಮದ್ ಅವರು ದಿನಾಂಕ 24/04/2026 ರಂದು ರಾತ್ರಿ ಅಂಬಿಕಾ ಸಾವಜಿ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಹೊಂಚು ಹಾಕಿ ಬಂದಿದ್ದ ಹಂತಕರ ತಂಡ, ಹರಿತವಾದ ಆಯುಧಗಳಿಂದ ಅವರ ಮೇಲೆ ಏಕಾಏಕಿ ಮರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿತ್ತು.

ಈ ಸಂಬಂಧ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆಯ ವೇಳೆ ಈ ಕೊಲೆಗೆ ‘ಮೀಟರ್ ಬಡ್ಡಿ’ ವ್ಯವಹಾರದ ಹಗೆತನವೇ ಕಾರಣ ಎಂಬುದು ಬಯಲಾಗಿದೆ. ಮೊದಲನೇ ಆರೋಪಿ ಮಂಜುನಾಥ ಕಾಜಗಾರ ಮತ್ತು ಮೃತ ಜಮೀರ್ ಅಹ್ಮದ್ ನಡುವೆ ಹಣಕಾಸಿನ ವಿಚಾರವಾಗಿ ಮನಸ್ತಾಪ ಉಂಟಾಗಿತ್ತು.
ಇದೇ ಕಾರಣಕ್ಕೆ ಮಂಜುನಾಥ ಇತರ ನಾಲ್ವರಿಗೆ ಸುಪಾರಿ ನೀಡಿ ಜಮೀರ್‌ನನ್ನು ಮುಗಿಸಲು ಪ್ಲಾನ್ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಬಂಧಿತರನ್ನು ಮಂಜುನಾಥ ಕಾಜಗಾರ, ಶ್ರೀಕಾಂತ ಕಿರಣಗಿ, ಮಂಜುನಾಥ ಬೆಳಗಾಂವ, ಅಭಿಷೇಕ ಬದಶೆಟ್ಟಿ ಮತ್ತು ದೀಪಕ ನವಲೆ ಎಂದು ಗುರುತಿಸಲಾಗಿದೆ. ಇವರು ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಎರಡು ಬೈಕ್ ಹಾಗೂ ಒಂದು ಕಂಟ್ರಿ ಮೇಡ್ ಪಿಸ್ತೂಲ್ ಮತ್ತು ಆರು ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ಕನ್ನಡ ಎಸ್ಪಿ ದೀಪನ್ ಎಮ್.ಎನ್, ಹೆಚ್ಚುವರಿ ಎಸ್ಪಿ ಕೃಷ್ಣಮೂರ್ತಿ, ಶಿರಸಿ ಡಿವೈಎಸ್ಪಿ ಶ್ರೀಮತಿ ಗೀತಾ ಪಾಟೀಲ್, ಮುಂಡಗೋಡ ಪಿಐ ರಂಗನಾಥ್ ನೀಲಮ್ಮನವರ್, ಗೋಕರ್ಣ ಠಾಣೆ ಪಿಐ ಶ್ರೀಧರ ಎಸ್.ಆರ್, ಪಿಎಸ್ಐ ಮಂಜುನಾಥ ಗೌಡರ, ಚಿತ್ತಾಕುಲ ಠಾಣೆ ಪಿಎಸ್ಐ ಪರಶುರಾಮ ಮಿರ್ಜಗಿ, ಯಲ್ಲಾಪುರ ಠಾಣೆ ಪಿಎಸ್ಐ ರಾಜಶೇಖರ ವಂದಲಿ ರವರ ನೇತೃತ್ವದಲ್ಲಿ, ಮುಂಡಗೋಡ ಠಾಣೆ ಸಿಬ್ಬಂದಿಗಳಾದ ತಿರುಪತಿ ಚೌಡಣ್ಣನವರ, ಲಂಬಾಣಿ ಬಸವರಾಜ, ಮಹಾಂತೇಶ ಮುಧೋಳ, ಮುತ್ತಣ್ಣ ಭೋದಿ, ನಾಗಪ್ಪ ಮೋರಟಗಿ, ಸಂಜು ರಾಠೋಡ, ಮಂಜುನಾಥ ಓಣಿಕೇರಿ, ಬಸವರಾಜ ಒಡೆಯರ್, ಯಲ್ಲಾಪುರ ಪೋಲೀಸ್ ಠಾಣೆಯ ಸಿಬ್ಬಂದಿಗಳಾದ ಮಹಮ್ಮದ ಶಫೀ ಶೇಖ, ಬಸವರಾಜ ಹಗರಿ, ಪ್ರವೀಣ ಪೂಜಾರ, ಗೊಂಕರ್ಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಶ್ರೀಕಾಂತ ಕಟಟರ ಹಾಗೂ ಟೇಕ್ನಿಕಲ್ ಸೆಲ್ ಕಾರವಾರದ ಸಿಬ್ಬಂದಿಯಾದ ಉದಯ ಗುನಗಾ, ಬಬನ್ ಕದಂ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related News

error: Content is protected !!