ದೆಹಲಿ ಮೂಲದ 30 ವರ್ಷದ ಹಿನಾ ಅಲಿಯಾಸ್ ಮುಬ್ಬಾಸರೀನ್ ಎಂಬ ಮಹಿಳೆಯ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಉತ್ತರ ಪ್ರದೇಶದ ಬಾಗಪತ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಪ್ರೇಮದ ನೆಪದಲ್ಲಿ ಪೊಲೀಸ್ ಕಾನ್ಸ್ಟೇಬಲ್ರನ್ನು ವಂಚಿಸಿ, ಮತಾಂತರಕ್ಕೆ ಒತ್ತಾಯಿಸಿ ಹಣ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ.
ಬಾಗಪತ್ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 35 ವರ್ಷದ ಪೊಲೀಸ್ ಕಾನ್ಸ್ಟೇಬಲ್ ಶ್ರೀಕಾಂತ್ ತಮ್ಮ ದೂರಿನಲ್ಲಿ, ಗಾಜಿಯಾಬಾದ್ಗೆ ವರ್ಗಾವಣೆಯಾದ ಬಳಿಕ ಹಿನಾ ಪರಿಚಯವಾಗಿದ್ದು, ಪತ್ನಿ ನಿಧನವಾದ ಹಿನ್ನೆಲೆಯಲ್ಲಿ ಮಾನಸಿಕವಾಗಿ ದುರ್ಬಲವಾಗಿದ್ದ ಸಮಯದಲ್ಲಿ ಆಕೆ ಅವರನ್ನು ಪ್ರೇಮಪಾಶದಲ್ಲಿ ಸೆಳೆದಿದ್ದಾಳೆ ಎಂದು ತಿಳಿಸಿದ್ದಾರೆ.
ಮುಂದೆ ಇಬ್ಬರ ನಡುವೆ ಮತಾಂತರ ವಿಚಾರವಾಗಿ ಜಗಳ ಉಂಟಾಗಿದ್ದು, ಬಳಿಕ ಹಿನಾ ದೆಹಲಿಯಲ್ಲಿ ಶ್ರೀಕಾಂತ್ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಈ ಪ್ರಕರಣದ ಆಧಾರದ ಮೇಲೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು.
ಜೈಲಿನಿಂದ ಬಿಡುಗಡೆಯಾದ ನಂತರ, ಹಿನಾ ಶ್ರೀಕಾಂತ್ಗೆ ಇಸ್ಲಾಂ ಧರ್ಮ ಸ್ವೀಕರಿಸಿದರೆ ತನ್ನ ಪರವಾಗಿ ಸಾಕ್ಷಿ ನೀಡುವುದಾಗಿ ಹಾಗೂ ತನ್ನ ಗಂಡನನ್ನು ಬಿಟ್ಟು ಮದುವೆಯಾಗುವುದಾಗಿ ಹೇಳಿದ್ದಾಳೆ ಎನ್ನಲಾಗಿದೆ. ಈ ಮಾತು ನಂಬಿ ಕಾನ್ಸ್ಟೇಬಲ್ ಮತಾಂತರಗೊಂಡಿದ್ದಾರೆ.
ಆದರೆ ನಂತರ ಮಹಿಳೆ ಹಾಗೂ ಆಕೆಯ ಸಹಚರರು ವಿವಿಧ ಕಾರಣಗಳನ್ನು ಹೇಳಿ ಅವರನ್ನು ವಂಚಿಸಿದ್ದು, ಪ್ರಕರಣವನ್ನು ಹಿಂಪಡೆಯದೇ ಬೆದರಿಕೆ ಹಾಕಿ ಸುಮಾರು ₹17 ಲಕ್ಷ ಹಣವನ್ನು ಸುಲಿಗೆ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶ್ರೀಕಾಂತ್ ಬಾಗಪತ್ನಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿ, ದೆಹಲಿಯಲ್ಲಿ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.
