ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ದಿನಾಂಕ 02-04-2026 ಗುರುವಾರದಂದು ಆಗಮಿಸಿದ ಶ್ರೀ ಉಜ್ಜಯಿನಿ ಜಗದ್ಗುರುಗಳನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಸಮ್ಮಳ ವಾದ್ಯ, ಡೊಳ್ಳು ಕುಣಿತ, ಮತ್ತು ಕನ್ಯಾಮಣಿಯರು ಹಾಗೂ ಸುಮಂಗಲೆಯರಿಂದ ಕಳಸ, ಕುಂಭಮೇಳದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆಯ ಮೂಲಕ ಅದ್ದೂರಿಯಾಗಿ ಗ್ರಾಮಸ್ಥರು ಸ್ವಾಗತಿಸಿದರು.
ಆನಂತರ ವೇದಿಕೆ ಕಾರ್ಯಕ್ರಮಗಳನ್ನು ಜ್ಯೋತಿ ಬೆಳಗುವುದರೊಂದಿಗೆ ಧರ್ಮಸಭೆಗೆ ಅಧಿಕೃತ ಚಾಲನೆ ನೀಡಿದರು. ಉದ್ಘಾಟನಾ ನುಡಿಯನ್ನು ಮಾನ್ಯ ಶಾಸಕರಾದ ಶ್ರೀ ಕೆ. ನೇಮಿರಾಜನಾಯ್ಕ್ ಅವರು ಅನ್ನದಾತ ರೈತರನ್ನು ನೆನೆದರು ಹಾಗೂ ಗ್ರಾಮಸ್ಥರು ದುಷ್ಚಟಗಳಿಂದ ದೂರವಿರಲು ಸಂಕಲ್ಪ ಮಾಡಿದರು. ಶಾಸಕರ ಅನುದಾನದಡಿಯಲ್ಲಿ ಸುಮಾರು 60 ಲಕ್ಷ ರೂಪಾಯಿಗಳನ್ನು ಗ್ರಾಮದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ನೀಡುವ ಭರವಸೆ ಕೊಟ್ಟರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಎಸ್. ಗುರುಮೂರ್ತಿ ಹರಾಳು ಅವರು ಕರಿಗಲ್ಲುಗಳು ಗ್ರಾಮದ ಸೈನಿಕರಿದ್ದಂತೆ; ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು ಹಾಗೂ ಗ್ರಾಮದ ಸರಕಾರಿ ನೌಕರರ ತನು, ಮನ, ಧನ ಸೇವೆಯನ್ನು ಸ್ಮರಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಎಂ.ಎಂ.ಜೆ. ಹರ್ಷವರ್ಧನ್ ಹಾಗೂ ಪಿ.ಎಚ್. ದೊಡ್ಡರಾಮಣ್ಣ ಅವರು ಮಾತನಾಡಿದರು.
ಗ್ರಾಮದ ಸರಕಾರಿ ಶಾಲೆಯ ವಿದ್ಯಾರ್ಥಿನಿಯರಿಂದ ಭರತ ನಾಟ್ಯ ನೃತ್ಯ ಎಲ್ಲರ ಗಮನ ಸೆಳೆಯಿತು.
ಪ್ರಮುಖ ಘಟ್ಟವಾದ ಉಜ್ಜಯಿನಿ ಶ್ರೀಗಳಿಂದ ಆಶೀರ್ವಚನ ಕಾರ್ಯಕ್ರಮದಲ್ಲಿ ದೇಶದ ಬೆನ್ನೆಲುಬಾಗಿ ನಿಂತಿರುವ ರೈತರ ಬದುಕು ಕಲ್ಯಾಣವಾಗಲಿ, ಜೊತೆಗೆ ಯಾವ ವಿಜ್ಞಾನ, ತಂತ್ರಜ್ಞಾನವೂ ಒಂದು ಬೀಜವನ್ನು ಹಿಡಿ ಕಾಳಾಗಿ ಮಾಡಲು ಸಾಧ್ಯವಿಲ್ಲ; ಅದೇನಿದ್ದರೂ ರೈತರಿಂದ ಮಾತ್ರ ಸಾಧ್ಯವೆಂದು ಅಭಿಪ್ರಾಯ ಪಟ್ಟರು. ಗೋಹತ್ಯೆಯನ್ನು ನಿಷೇಧಿಸಬೇಕೆಂದು ಆಗ್ರಹಿಸಿದರು. ದೇವಸ್ಥಾನದ ಕಳಸಗಳು ನೆಟ್ ವರ್ಕ್ ಟವರ್ ಗಳಿದ್ದಂತೆ; ಭಗವಂತನ ಕೃಪೆಗೆ ಭಕ್ತರು ಪಾತ್ರರಾಗುವಲ್ಲಿ ಸಂಬಂಧ ಸೇತುವೆಯನ್ನು ಕಲ್ಪಿಸುತ್ತವೆ. ಉಜ್ಜಯಿನಿ ಪೀಠವು ಮಳೆ ಪೀಠವಾಗಿ ಪ್ರಸಿದ್ಧ ಪಡೆದಿದ್ದು, ಜಗದ್ಗುರುಗಳು ಅಂತಿಮವಾಗಿ ಗ್ರಾಮದಲ್ಲೇ ವಾಸ್ತವ್ಯ ಹೂಡುವುದರೊಂದಿಗೆ ಆಶೀರ್ವಚನ ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು.
ವರದಿ:- ಮಣಿಕಂಠ. ಬಿ
