ಉಡುಪಿ: ಅಬಕಾರಿ ಇಲಾಖೆಯ ಉಡುಪಿ ಜಿಲ್ಲಾ ಅಧೀಕ್ಷಕ ಶ್ರೀನಿವಾಸ್ ಟಿ.ಎಂ. ವಿರುದ್ಧ ಅಪಾರ ಪ್ರಮಾಣದ ಅಕ್ರಮ ಆಸ್ತಿ ಸಂಗ್ರಹಿಸಿರುವ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ತನಿಖೆಯ ವೇಳೆ ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.
ಮಾರ್ಚ್ 11ರಂದು ಲೋಕಾಯುಕ್ತ ಅಧಿಕಾರಿಗಳು ಶ್ರೀನಿವಾಸ್ ಟಿ.ಎಂ. ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ನಿವಾಸಗಳನ್ನು ಒಳಗೊಂಡಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿರುವ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ಪರಿಶೀಲನೆ ನಡೆಸಿದರು. ದಾಳಿಯ ಸಂದರ್ಭದಲ್ಲಿ ಆರೋಪಿತ ಅಧಿಕಾರಿಗೆ ಸಂಬಂಧಿಸಿದಂತೆ ಹಲವು ಆಸ್ತಿಗಳ ದಾಖಲೆಗಳು ಮತ್ತು ಮೌಲ್ಯಮಾಪನಕ್ಕೆ ಒಳಪಡುವ ಸಂಪತ್ತಿನ ಮಾಹಿತಿ ದೊರಕಿದೆ.
ಪರಿಶೀಲನೆ ವೇಳೆ ಒಟ್ಟು 11 ನಿವೇಶನಗಳು, ಆರು ವಾಸದ ಮನೆಗಳು ಹಾಗೂ ಸುಮಾರು 31 ಎಕರೆ ಕೃಷಿ ಜಮೀನು ಇರುವುದನ್ನು ಪತ್ತೆಹಚ್ಚಲಾಗಿದೆ. ಈ ಸ್ಥಿರ ಆಸ್ತಿಗಳ ಒಟ್ಟು ಮೌಲ್ಯ ಸುಮಾರು ₹6.90 ಕೋಟಿ ಎಂದು ಅಂದಾಜಿಸಲಾಗಿದೆ.
ಇದರೊಂದಿಗೆ ಸುಮಾರು ₹1.47 ಕೋಟಿ ಮೌಲ್ಯದ ಚಿನ್ನಾಭರಣಗಳು, ₹17 ಲಕ್ಷ ಮೌಲ್ಯದ ವಾಹನಗಳು, ₹25.75 ಲಕ್ಷ ಮೌಲ್ಯದ ಬ್ಯಾಂಕ್ ಠೇವಣಿಗಳು ಸೇರಿದಂತೆ ಹಲವು ಚರ ಆಸ್ತಿಗಳೂ ಪತ್ತೆಯಾಗಿವೆ. ಇನ್ನಿತರ ವಸ್ತುಗಳ ಮೌಲ್ಯ ಸುಮಾರು ₹72 ಲಕ್ಷ ಎಂದು ಅಂದಾಜಿಸಲಾಗಿದ್ದು, ಒಟ್ಟಾರೆ ಚರ ಆಸ್ತಿಯ ಮೌಲ್ಯ ಸುಮಾರು ₹2.66 ಕೋಟಿ ಆಗಿದೆ.
ಸ್ಥಿರ ಮತ್ತು ಚರ ಆಸ್ತಿಗಳನ್ನು ಸೇರಿಸಿ ಒಟ್ಟು ₹9.57 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎಂದು ಉಡುಪಿ ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶ್ರೀನಿವಾಸ್ ಟಿ.ಎಂ. ಅವರು ಇದಕ್ಕೂ ಮೊದಲು ಮಂಗಳೂರಿನಲ್ಲಿ ಅಬಕಾರಿ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಆ ಅವಧಿಯಲ್ಲಿಯೂ ಅವರ ವಿರುದ್ಧ ಹಲವು ಭ್ರಷ್ಟಾಚಾರ ಸಂಬಂಧಿತ ಆರೋಪಗಳು ಕೇಳಿಬಂದಿದ್ದವು ಎಂದು ತಿಳಿದುಬಂದಿದೆ. ತನಿಖೆ ಮುಂದುವರೆದಿದ್ದು, ಇನ್ನಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.

error: Content is protected !!