
ಬೆಂಗಳೂರು: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಮೇಲೆ ನಡೆದಿದ್ದ ದಾಳಿಯ ಹಿಂದೆ ಗುಜರಾತ್ನ ರಾಜ್ಕೋಟ್ ಮೂಲದ ರಾಜೇಶ್ ಸಕ್ರಿಯಾ ಎಂಬುವವರ ಕೈವಾಡವಿದೆ ಎಂದು ಪೊಲೀಸರು ಗುರುತಿಸಿದ್ದಾರೆ. ಘಟನೆಯ ಬಳಿಕ ಪೊಲೀಸರು ಅವರ ಕುಟುಂಬವನ್ನು ಸಂಪರ್ಕಿಸಿದ್ದು, ಈ ವೇಳೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ರಾಜೇಶ್ ಅವರ ತಾಯಿ ಭಾನು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಾ, “ನನ್ನ ಮಗನಿಗೆ ನಾಯಿಗಳ ಮೇಲೆ ಅಪಾರ ಪ್ರೀತಿ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಬೀದಿ ನಾಯಿಗಳನ್ನು ಒಟ್ಟುಗೂಡಿಸಿ ಆಶ್ರಯ ಕೇಂದ್ರಗಳಿಗೆ ಕಳುಹಿಸುವಂತೆ ಆದೇಶಿಸಿದ ತೀರ್ಪಿನಿಂದ ಅವನು ಬೇಸರಗೊಂಡಿದ್ದ. ಅದಾದ ಬಳಿಕ ಅವನು ತಕ್ಷಣ ದೆಹಲಿಗೆ ಹೊರಟನು. ನಾವು ಹೆಚ್ಚಿನ ಮಾಹಿತಿಯನ್ನು ತಿಳಿದಿಲ್ಲ” ಎಂದು ಹೇಳಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಗೆ ಮೊದಲು ಸಕ್ರಿಯಾ ಅವರು ಕೆಲವು ದಾಖಲೆಗಳೊಂದಿಗೆ ಮುಖ್ಯಮಂತ್ರಿ ರೇಖಾ ಗುಪ್ತಾ ಅವರನ್ನು ಭೇಟಿಯಾಗಿ ಮಾತನಾಡಲು ಮುಂದಾಗಿದ್ದರು. ಆದರೆ ಮಾತನಾಡುವ ವೇಳೆ ತೀವ್ರವಾಗಿ ಕೂಗಲಾರಂಭಿಸಿ, ನಂತರ ಹಠಾತ್ ದಾಳಿ ನಡೆಸಿದ್ದಾರೆ. ಅಲ್ಲದೆ, ಕೆಲವರು ಅವರು ಆ ಸಮಯದಲ್ಲಿ ಮದ್ಯಪಾನ ಮಾಡಿರುವಂತಿದ್ದರು ಎಂದು ಹೇಳಿದರೂ, ಇದರ ಬಗ್ಗೆ ಅಧಿಕೃತ ದೃಢೀಕರಣ ಇನ್ನೂ ಲಭ್ಯವಾಗಿಲ್ಲ.
ಈ ಘಟನೆ ರಾಜಕೀಯ ವಲಯದಲ್ಲಿಯೂ ಭಾರಿ ಚರ್ಚೆಗೆ ಕಾರಣವಾಗಿದ್ದು, ದೆಹಲಿ ಪೊಲೀಸ್ ಇಲಾಖೆ ಪ್ರಕರಣದ ತನಿಖೆಯನ್ನು ಮುಂದುವರಿಸಿದೆ.