ಅಲ್ವಾರ್ (ಆ.20): ರಾಜಸ್ಥಾನದ ಅಲ್ವಾರ್‌ನಲ್ಲಿ ಬಾಡಿಗೆ ಮನೆಯ ತಾರಸಿನಲ್ಲಿ ಪತ್ತೆಯಾದ ಕೊಳೆತ ಶವ ಪ್ರಕರಣಕ್ಕೆ 8 ವರ್ಷದ ಬಾಲಕನ ಹೇಳಿಕೆ ಹೊಸ ತಿರುವು ನೀಡಿದೆ. “ಅಮ್ಮ ಮತ್ತು ಅಂಕಲ್ ಸೇರಿ ನನ್ನ ಅಪ್ಪನನ್ನು ಡ್ರಮ್ನೊಳಗೆ ಹಾಕುವುದನ್ನು ನಾನು ನೋಡಿದ್ದೇನೆ” ಎಂದು ಮೃತ ಹಂಸರಾಜ್ ಅವರ ಪುತ್ರನು ಪೊಲೀಸರಿಗೆ ಸ್ಪಷ್ಟವಾಗಿ ಹೇಳಿದ್ದಾನೆ.

ಕೆಲವು ದಿನಗಳ ಹಿಂದೆ ಆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದುದರಿಂದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರು. ಶೋಧ ಕಾರ್ಯದಲ್ಲಿ ತಾರಸಿನಲ್ಲಿ ಪೂರ್ತಿ ಸೀಲ್ ಮಾಡಲಾಗಿದ್ದ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ ಸಿಕ್ಕಿದ್ದು, ಅದರಲ್ಲಿ ಶವ ಪತ್ತೆಯಾದಿತ್ತು. ಬಳಿಕ ಅದು ಮನೆಯ ಮಾಲೀಕ ಹಂಸರಾಜ್ ಅವರದೇ ಎಂಬುದು ದೃಢಪಟ್ಟಿತ್ತು. ಆದರೆ ಪತ್ನಿ ಹಾಗೂ ಮಕ್ಕಳು ನಾಪತ್ತೆಯಾಗಿದ್ದು ಅನುಮಾನಗಳಿಗೆ ಕಾರಣವಾಗಿತ್ತು.

ಇದೀಗ ಮಗ ಹರ್ಷಲ್ ನೀಡಿರುವ ಹೇಳಿಕೆ ಪ್ರಕಾರ, ಘಟನೆ ನಡೆದ ರಾತ್ರಿ ಹಂಸರಾಜ್ ತಮ್ಮ ಪತ್ನಿ ಸುನಿತಾ ಮತ್ತು ಆಕೆಯ ಪ್ರಿಯಕರ ಜಿತೇಂದ್ರ ಶರ್ಮಾ ಜೊತೆ ಕುಡಿತದಲ್ಲಿ ತೊಡಗಿಕೊಂಡಿದ್ದರು. ಕುಡಿತದ ನಶೆಯಲ್ಲಿ ಹಂಸರಾಜ್ ಪತ್ನಿಗೆ ಹಲ್ಲೆ ಮಾಡಲು ಮುಂದಾದಾಗ ಜಿತೇಂದ್ರ ಮಧ್ಯ ಪ್ರವೇಶಿಸಿ ಅವರ ಮೇಲೆ ದಾಳಿ ಮಾಡಿದ್ದ. ನಂತರ ಹರ್ಷಲ್‌ಗೆ ಒಳಗೆ ಹೋಗಿ ಮಲಗಲು ಹೇಳಲಾಗಿತ್ತು.

ಅವನ ಹೇಳಿಕೆಯ ಪ್ರಕಾರ, ನಿದ್ರೆಯಿಂದ ಎಚ್ಚರವಾದಾಗ ತಾಯಿ ಹಾಗೂ “ಅಂಕಲ್” ಇನ್ನೂ ಅಲ್ಲೇ ಇದ್ದರು. ಇದೇ ವೇಳೆ ಹಂಸರಾಜ್ ಅವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದ್ದು, ಶವ ಬೇಗನೆ ಕೊಳೆತುಹೋಗುವಂತೆ ದೇಹದ ಮೇಲೆ ಉಪ್ಪು ಸಿಂಪಡಿಸಿದ್ದರು. ಕೊಲೆ ಮಾಡಿದ ಬಳಿಕ ಸುನಿತಾ ಹಾಗೂ ಜಿತೇಂದ್ರ ಊರಿನಿಂದ ಪರಾರಿಯಾಗಿದ್ದರು.

ಈ ಬೆಳವಣಿಗೆಯಿಂದ ಅಲ್ವಾರ್ ಪೊಲೀಸರು ಈಗ ಪತ್ನಿ ಹಾಗೂ ಆಕೆಯ ಪ್ರಿಯಕರರಿಗಾಗಿ ತೀವ್ರ ಶೋಧ ಆರಂಭಿಸಿದ್ದಾರೆ. ಮಗ ನೀಡಿದ ಸಾಕ್ಷ್ಯವು ಹಂಸರಾಜ್ ಹತ್ಯೆ ಪ್ರಕರಣಕ್ಕೆ ಸ್ಪಷ್ಟ ದಿಕ್ಕು ನೀಡಿದ್ದು, ಸ್ಥಳೀಯರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!