ಅಗರ್ತಲಾ, ಆ. 11 – ತ್ರಿಪುರಾದ ಖೋವಾಯಿ ಜಿಲ್ಲೆಯ ಬೆಹಲಾಬರಿ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಘಟನೆ ಒಂದು ವರ್ಷದ ಹೆಣ್ಣುಮಗುವಿನ ಪ್ರಾಣ ಕಸಿದುಕೊಂಡಿದೆ. ಗಂಡು ಮಗು ಬೇಕೆಂಬ ಅಸಹ್ಯ ಹಠದಿಂದ ಅಪ್ಪನೇ ತನ್ನ ಮಗಳಿಗೆ ವಿಷಕೊಟ್ಟಿರುವ ಆರೋಪ ಕೇಳಿಬಂದಿದೆ.

ಆರೋಪಿಯನ್ನು ಟಿಎಸ್‌ಆರ್ (ತ್ರಿಪುರಾ ಸ್ಟೇಟ್ ರೈಫಲ್ಸ್) 10ನೇ ಬೆಟಾಲಿಯನ್‌ನ ಜವಾನ್ ರಥೀಂದ್ರ ದೇಬ್‌ಬರ್ಮಾ ಎಂದು ಗುರುತಿಸಲಾಗಿದೆ. ಅವರು ಪ್ರಸ್ತುತ ಎಡಿಸಿ ಖುಮುಲ್ವಾಂಗ್ ಪ್ರಧಾನ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮೃತ ಮಗು ಸುಹಾನಿ ದೇಬ್‌ಬರ್ಮಾ ಎಂದು ಗುರುತಿಸಲಾಗಿದೆ. ಕಳೆದ ಶುಕ್ರವಾರ (ಆ. 8) ರಾತ್ರಿ ಘಟನೆ ನಡೆದಿದ್ದು, ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಶಿಶುವನ್ನು ಮೃತಪಟ್ಟಿರುವುದಾಗಿ ಘೋಷಿಸಿದರು. ಮರಣೋತ್ತರ ಪರೀಕ್ಷೆಗೆ ಶವವನ್ನು ಶವಾಗಾರದಲ್ಲಿ ಇರಿಸಲಾಗಿದೆ.

ಮಗುವಿನ ತಾಯಿ ಮಿತಾಲಿ ದೇಬ್‌ಬರ್ಮಾ ಅವರ ಪ್ರಕಾರ, ಗಂಡನು ಬಿಸ್ಕತ್ ಕೊಡಿಸುವ ನೆಪದಲ್ಲಿ ಮಗಳಿಗೆ ವಿಷ ನೀಡಿದ್ದಾನೆ. “ನನ್ನ ಪತಿಗೆ ಸದಾ ಗಂಡು ಮಗು ಬೇಕೆಂಬ ಹಠವಿತ್ತು. ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಕ್ಕಾಗಿ ನನಗೆ ನಿರಂತರವಾಗಿ ಹಿಂಸೆ ನೀಡುತ್ತಿದ್ದ. ಆ ರಾತ್ರಿ ನಾವು ನನ್ನ ಸಹೋದರಿಯ ಮನೆಯಲ್ಲಿ ಇದ್ದಾಗ, ಅವನು ಮಗಳು ಮತ್ತು ನನ್ನ ಸಹೋದರಿಯ ಮಗನನ್ನು ಹತ್ತಿರದ ಅಂಗಡಿಗೆ ಕರೆದುಕೊಂಡು ಹೋದ. ಕೆಲವೇ ಕ್ಷಣಗಳಲ್ಲಿ ಮಗಳು ವಾಂತಿಯಾಗುತ್ತಾ ಅಸ್ವಸ್ಥಳಾಗಿದ್ದಳು. ಅವಳ ಬಾಯಿಂದ ಔಷಧದ ವಾಸನೆ ಬರುತ್ತಿತ್ತು. ವಿಚಾರಿಸಿದಾಗ ಆತನು ಏನೂ ನೀಡಿಲ್ಲವೆಂದು ನಿರಾಕರಿಸಿದ. ಆದರೆ ಆಕೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಸಾವನ್ನಪ್ಪಿದ್ದಳು” ಎಂದು ಮಿತಾಲಿ ಕಣ್ಣೀರು ಹಾಕುತ್ತಾ ಹೇಳಿದ್ದಾರೆ.

ಅವರು ತನ್ನ ಪತಿಗೆ ಮರಣದಂಡನೆ ವಿಧಿಸುವಂತೆ ಕೋರಿದ್ದಾರೆ.

ಪೊಲೀಸರು ರಥೀಂದ್ರ ದೇಬ್‌ಬರ್ಮಾವನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡು, ಭಾನುವಾರ ಅಧಿಕೃತವಾಗಿ ಬಂಧಿಸಿದ್ದಾರೆ. ನ್ಯಾಯಾಲಯವು ಮೂವರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ತನಿಖೆ ಮುಂದುವರಿಯುತ್ತಿದೆ.

***

ಭ್ರಷ್ಟರ ಬೇಟೆ ಪತ್ರಿಕೆಗೆ ರಾಜ್ಯಾದ್ಯಂತ ವರದಿಗಾರರು ಬೇಕಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 80 88070392

error: Content is protected !!